ಬೆಂಗಳೂರು: ದೇಶದಾದ್ಯಂತ ಟೋಲ್ ಮುಕ್ತಗೊಳಿಸಬೇಕು, ವಿಮಾ ಪಾಲಿಸಿ ಹಣವನ್ನು ಕಡಿಮೆ ಮಾಡಬೇಕು ಹಾಗೂ ಡಿಸೇಲ್ ಅನ್ನು ಜಿಎಸ್ಟಿ ಅಡಿಯಲ್ಲಿ ತರಬೇಕು ಎಂದು ಆಗ್ರಹಿಸಿ ಜು.20 ರಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಕಾಲ ವಾಣಿಜ್ಯ ಲಾರಿಗಳ ಮಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಸತತವಾಗಿ ಲಾರಿ ಮಾಲಕರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮುಷ್ಕರ ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಆದುದರಿಂದಾಗಿ, ಮತ್ತೊಮ್ಮೆ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಹೇಳದರು.
ದೇಶದಾದ್ಯಂತ 412 ಟೋಲ್ಗಳಿದ್ದು, ವಾರ್ಷಿಕವಾಗಿ 1.2 ಲಕ್ಷ ಕೋಟಿ ಹಣ ಭರಿಸಬೇಕಾಗುತ್ತಿದೆ. ನಾವು ಟೋಲ್ ಕಟ್ಟಲು ಸಿದ್ಧರಿದ್ದೇವೆ. ಆದರೆ, ಹಣ ಪಾವತಿಸುವ ವಿಧಾನವನ್ನು ಬದಲಿಸಬೇಕು. ದೇಶದಲ್ಲಿ 1 ಕೋಟಿ ವಾಣಿಜ್ಯ ವಾಹನಗಳು ಟೋಲ್ಗಳ ಮುಖಾಂತರ ಸಂಚಾರ ಮಾಡುತ್ತಿವೆ. ಹೀಗಾಗಿ, ವರ್ಷಕ್ಕೆ 50 ಸಾವಿರದಷ್ಟು ಹಣವನ್ನು ವರ್ಷದ ಮೊದಲೇ ನೀಡಲು ನಾವು ಸಿದ್ಧರಿದ್ದು, ಎಲ್ಲ ಟೋಲ್ಗಳಲ್ಲಿ ನಮಗೆ ಮುಕ್ತ ಅವಕಾಶ ನೀಡಬೇಕು. ಈ ಮೂಲಕ ಸರಕಾರಕ್ಕೆ ವಾರ್ಷಿಕವಾಗಿ ಸಾವಿರಾರು ಕೋಟಿ ಆದಾಯ ಸಂದಾಯವಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳ ಡಿಸೇಲ್ ಮೇಲೆ 1 ರೂ. ಸೆಸ್ ವಿಧಿಸಿದರೆ 13 ಸಾವಿರ ಕೋಟಿ, 2 ರೂ. ಸೆಸ್ ವಿಧಿಸಿದರೆ 26 ಸಾವಿರ ಕೋಟಿ ವಾರ್ಷಿಕ ಆದಾಯ ಹೆಚ್ಚಾಗುತ್ತದೆ. ಟೋಲ್ ಮುಕ್ತ ಮಾಡಬಹುದಾಗಿದೆ. ಇದೀಗ ಲಾರಿಗಳು ಟೋಲ್ಗಳಲ್ಲಿ 15 ರಿಂದ 20 ನಿಮಿಷ ನಿಲ್ಲಬೇಕಾಗುತ್ತಿದೆ. ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುವ ಲಾರಿಗಳು 14 ಗಂಟೆಗಳ ಕಾಲ ಟೋಲ್ಗಳಲ್ಲಿ ಸಮಯ ವ್ಯರ್ಥ ಮಾಡುತ್ತಿವೆ. ಇದರಿಂದಾಗಿ, ಡಿಸೇಲ್, ವಾಹನ ರಿಪೇರಿ ಹಾಗೂ ಟೋಲ್ಗಳ ನಿರ್ವಹಣಾ ವೆಚ್ಚಗಳಿಂದ 84 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜು.20 ರಿಂದ ನಡೆಯಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬಸ್ ಮಾಲಕರ ಸಂಘಗಳು, ತರಕಾರಿ ಸಾಗಾಣಿಕಾ ಲಾರಿಗಳ ಮಾಲಕರು ಸೇರಿದಂತೆ ಎಲ್ಲ ಸರಕು-ಸಾಗಾಣಿಕೆ ವಾಹನಗಳ ಮಾಲಕರು, ಚಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ, ಮೆಡಿಸಿನ್ ಮತ್ತು ಹಾಲು ಸಾಗಾಣಿಕೆ ವಾಹನಗಳು ಹೊರತುಪಡಿಸಿ ದೇಶದಾದ್ಯಂತ 90 ಲಕ್ಷಕ್ಕೂ ಅಧಿಕ, ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂದು ಅವರು ವಿವರಿಸಿದರು.
ಬೇಡಿಕೆಗಳು:
-ಸರಕು ಸಾಗಾಣಿಕೆ ವಾಹನಗಳಿಗೆ ಟೋಲ್ ಮುಕ್ತ ಮಾಡಬೇಕು.
-ಡಿಸೇಲ್ ದರವನ್ನು ಸರಕು ಸೇವಾ ತೆರಿಗೆ(ಜಿಎಸ್ಟಿ) ಅಡಿಯಲ್ಲಿ ತರವುದಲ್ಲದೇ ತ್ರೈಮಾಸಿಕ ಪರಿಶೀಲನಾ ಪದ್ಧತಿಯನ್ನು ಜಾರಿ ಮಾಡಬೇಕು.
-ಟಿಡಿಎಸ್ ರದ್ಧುಗೊಳಿಸಿ ಪೂರ್ವಭಾವಿ ಆದಾಯ ಕಾಯ್ದೆಯಾಗಿ ಪರಿವರ್ತಿಸಬೇಕು ಮತ್ತು ಈ-ವೇ ಬಿಲ್ ಸಮಸ್ಯೆ ಪರಿಹರಿಸಬೇಕು.
-ಪ್ರವಾಸಿ ವಾಹನಗಳಿಗೆ ಹಾಗೂ ಬಸ್ಗಳಿಗೆ ರಾಷ್ಟ್ರೀಯ ಪರವಾನಿಗೆ ನೀಡಬೇಕು.