ಭಟ್ಕಳ: ನಗರದ ಶಂಶುದ್ದೀನ್ ಸರ್ಕಲ್ನಿಂದ ಪೊಲೀಸ್ ಪೆರೇಡ್ ಮೈದಾನದ ತನಕ ಸುಮಾರು ೮-೧೦ ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳು ಡಾಂಬರು ರಸ್ತೆಯ ಮೇಲೆಯೇ ನಡೆದು ಹೋಗುವುದು ಅನಿವಾರ್ಯವಾಗಿದೆ ಎಂದು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗಳಿಗೆ ವಾಟ್ಸ್ಅಪ್ ದೂರು ಸಲ್ಲಿಸಿದೆ.
ಸಾಗರ ರಸ್ತೆಯ ಮಾರ್ಗವಾಗಿ ಶಾಲೆ, ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಬಿ.ಇ.ಓ. ಕಚೇರಿ, ಪೊಲೀಸ್ ಕ್ವಾರ್ಟರ್ಸ್, ಪೊಲೀಸ್ ಪೆರೇಡ್ ಮೈದಾನ ಕೂಡಾ ಇದ್ದು ರಾಜ್ಯ ಹೆದ್ದಾರಿಯಾದ್ದರಿಂದ ವಾಹನ ದಟ್ಟಣೆಯೂ ಸಾಕಷ್ಟು ಇರುತ್ತದೆ. ಈ ರಸ್ತೆಯಾಗಿ ದಿನಾಲೂ ಸಾವಿರಾರು ಜನರು ತಿರುಗಾಡುವುದರ ಜೊತೆಗೆ ೩೦೦೦ರಷ್ಟು ವಿದ್ಯಾರ್ಥಿಗಳಿಗೂ ಕೂಡಾ ಇದೇ ಮಾರ್ಗವಾಗಿ ಹೋಗುವುದು ಅನಿವಾರ್ಯವಾಗಿದೆ ಎಂದು ದೂರಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಸಾಗರ ರಸ್ತೆಯ ಇಕ್ಕೆಲಗಳಲ್ಲಿ ತಿರುಗಾಡಲು ಜಾಗವೇ ಇಲ್ಲವಾಗಿದ್ದು ಶಂಶುದ್ದೀನ್ ಸರ್ಕಲ್ನಿಂದ ಆನಂದ ಆಶ್ರಮ ಕಾನ್ವೆಂಟ್ ತನಕವೂ ವಾಹನ ನಿಲುಗಡೆ, ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬಗಳು, ಕುರುಚಲು ಗಿಡಗಳು, ಗೂಡಂಗಡಿಗಳು, ವಾಹನ ರಿಪೇರಿಯ ತಾಣ, ರಾಜ್ಯ ಹೆದ್ದಾರಿಯ ವಾಹನ ದಟ್ಟಣೆ ಜೊತೆಗೆ ಬೆಳಿಗ್ಗೆಯ ಸಮಯ ೧೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನಿವಾರ್ಯವಾಗಿ ಡಾಂಬರು ರಸ್ತೆಯ ಮೇಲೆಯೇ ನಡೆದು ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದೇ ಮಾರ್ಗವಾಗಿ ಎಲ್.ಕೆ.ಜಿ. ಯಿಂದ ಪಿ.ಜಿ.ಯ ತನಕದ ಮಕ್ಕಳು ಹೋಗಬೇಕಾಗಿರುವುದರಿಂದ ದಿನಾಲೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದೂ ಹೇಳಲಾಗಿದೆ.
ಸಂಬಂಧ ಪಟ್ಟ ಇಲಾಖೆಗೆ ಸೂಕ್ತ ಸೂಚನೆಯನ್ನು ನೀಡಿ ಅನಾಹುತವಾಗುವ ಮೊದಲು ರಸ್ತೆಯ ಅಕ್ಕಪಕ್ಕದ ಅಡೆತಡೆಗಳನ್ನು ನಿವಾರಿಸಿ, ವಿದ್ಯುತ್ ಕಂಬಗಳನ್ನು ಪುಟ್ ಪಾತ್ ಸ್ಥಳದಿಂದ ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ನಡೆದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದೂ ಸಂಘ ಮನವಿ ಮಾಡಿದೆ. ಸಂಘದ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ದೂರು ಸಂಖ್ಯೆ ೩೩೩೩ರಲ್ಲಿ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವೆಸೆಯು ದೊರೆತಿದೆ ಎನ್ನಲಾಗಿದೆ.