ಭಟ್ಕಳ: ಕಳೆದ ೩ ದಿನದ ಹಿಂದೆ ಭಟ್ಕಳ ತಾಲೂಕಿನ ಕರಿಕಲ್ನ ಓರ್ವ ಮಹಿಳೆಯೋರ್ವಳು ಎಚ್-೧ ಎನ್-೧ ಮಹಾಮಾರಿಗೆ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮೃತ ಮಹಿಳೆಯ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿಸಿದರು.
ಭಟ್ಕಳದ ತಾಲುಕಿನ ಕರಿಕಲ್ ನಿವಾಸಿಯಾದ ೪೦ ವರ್ಷ ಮಹಿಳೆ ನಾಗರತ್ನ ಶನಿಯಾರ ಮೋಗೇರ ಹಂದಿ ಜ್ವರದಿಂದ ಮೃತಪಟ್ಟಿದ್ದು, ಮೃತ ಮಹಿಳಾ ಕುಟುಂಬಕ್ಕೆ ಮಂಗಳವಾರದಂದು ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಹಾಗು ತಾಲುಕಾ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆ ವಿಶೇಷ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದರು. ಬರುವ ಸಣ್ಣ ಜ್ವರದ ಬಗ್ಗೆ ನಿಸ್ಕಾಳಜಿ ತೋರದೇ ತಕ್ಷಣಕ್ಕೆ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವ ಕೆಲಸ ಮಾಡಬೇಕು. ಮಳೆಗಾಲದ ಸಂಧರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮೃತ ಮಹಿಳೆಯ ಮೂರು ಮಕ್ಕಳನ್ನು ವೈಯಕ್ತಿಕವಾಗಿ ಸಂವಾದ ನಡೆಸಿ ಮಕ್ಕಳಿಗೆ ರೋಗಗಳಿಂದ ಮುನ್ನೆಚ್ಚರಿಕೆ ಕಾರ್ಯದ ಬಗ್ಗೆ ವಿವರಿಸಿದರು. ಹಾಗೂ ವಿಶೇಷ ಕಾಳಜಿ ಹೊತ್ತ ಜಿಲ್ಲಾ ಆರೋಗ್ಯಾಧಿಕಾರಿ ಮನೆಯವರಿಗೆ ತಮ್ಮ ಪೋನ್ ನಂಬರ್ ನೀಡಿ ಏನಾದರೂ ಆರೋಗ್ಯದಲ್ಲಿ ಸಮಸ್ಯೆಯಾದರೆ ತಕ್ಷಣಕ್ಕೆ ಕರೆ ಮಾಡುವಂತೆ ಸೂಚಿಸಿದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ “ ಕಳೆದೆರಡು ದಿನದಿಂದ ಭಟ್ಕಳದಲ್ಲಿ ಕಂಡು ಬಂದ ಡೆಂಗ್ಯು ಹಾಗು ಹಂದಿ ಜ್ವರದ ಬಗ್ಗೆ ವರದಿ ಬಂದಿದ್ದು, ಹಂದಿ ಜ್ವರದಿಂದ ಓರ್ವ ಮಹಿಳೆ ಸಾವನ್ನಪಪಿದ್ದರು. ಈ ಬಗ್ಗೆ ಪರಿಶೀಲನೆ ಹಾಗೂ ಮೃತ ಮಹಿಳೆ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದು, ಕುಟುಂಬಕ್ಕೆ ಇನ್ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ವಿವರಿಸಲಾಯಿತು. ಸೋಂಕು ರೋಗವಾದ ಹಿನ್ನೆಲೆಯಲ್ಲಿ ಕುಟುಂಬದವರ ಭದ್ರತೆಯ ಬಗ್ಗೆ ಪರಿವೀಕ್ಷಣೆ ಸಹ ಮಾಡಲಾಯಿತು. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಡೆಂಗ್ಯು ಜ್ವರ ಹಾಗೂ ಹಂದಿ ಜ್ವರದ ಬಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಆಯಾ ಪ್ರದೇಶದಲ್ಲಿ ಮುನ್ನೆಚ್ಚರಿಕೆಯ ಕ್ರಮ ಅನುಸರಿಸುವ ಬಗ್ಗೆ ಮಾಹಿತಿ ನೀಡಲಾಯಿತು.” ಎಂದರು.
ಈ ಸಂಧರ್ಬದಲ್ಲಿ ಡಿಸ್ಟಿಕ್ ಸವೈಯಲೆನ್ಸ ಆಫಿಸರ್ ಡಾ. ವಿನೋದ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ರಜನಿ ದೇಸಾಯಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.