ಭಟ್ಕಳ: ಜನರ ಸಮಸ್ಯೆಗಳನ್ನು ಬಿಂಬಿಸುವ, ಇಲಾಖೆಗಳ ಅಕ್ರಮ ಬಯಲಿಗೆಳೆಯುವ ವರದಿಗಳ ಜೊತೆಗೆ ಅಧಿಕಾರಿಗಳು, ಜನರು ಮಾಡಿದ ಒಳ್ಳೆಯ ಕಾರ್ಯಗಳನ್ನೂ ವರದಿ ಮಾಡುವ ಮೂಲಕ ಪತ್ರಿಕಾ ಧರ್ಮವನ್ನು ನಿಭಾಯಿಸುತ್ತಿದ್ದ ಪತ್ರಕರ್ತರ ಪತ್ರಿಕಾ ಸ್ವಾತಂತ್ರೃಕ್ಕೆ ಧಕ್ಕೆಯಾಗುವಂತಹ ಹಲವು ಘಟನೆಗಳನ್ನು ಖಂಡಿಸಿ ಭಟ್ಕಳದ ಪತ್ರಕರ್ತರು ಬುಧವಾರ ತಹಸಿಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.
ಕಾರವಾರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಪರೀಕ್ಷೆಯ ಸಮಯದಲ್ಲಿ ನಕಲು ನಡೆಯುತ್ತಿರುವ ಆರೋಪ ಕೇಳಿ ಬಂದಿದ್ದು. ಇವುಗಳ ಬಗೆಗೆ ವರದಿ ಮಾಡಲು ಜ. 5 ರಂದು ಕಾಲೇಜ್ಗೆ ತೆರಳಿದ ಕಾರವಾರದ ಮೂವರು ಪತ್ರಕರ್ತರ ಮೇಲೆ ಅಕ್ರಮ ಪ್ರವೇಶ ಮಾಡಿ, ಪರೀಕ್ಷೆ ನಡೆಯುವ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿರುವ ಬಗೆಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಲಾಗಿದೆ. ಪತ್ರಿಕಾ ಸ್ವಾತಂತ್ರೃಕ್ಕೆ ಧಕ್ಕೆಯುಂಟುಮಾಡುವ ಸುಳ್ಳು ಆರೋಪ ಹೊರಿಸಿ ಪತ್ರಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ತಂತ್ರ ಖಂಡನೀಯ ಎಂದು ಮನವಿಯಲ್ಲಿ ತಿಳಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಮೊದಲ ಮಹಡಿಯಲ್ಲಿರುವ ಸರ್ವೇ ವಿಭಾಗದ ಹೊರಗೆ ಪತ್ರಕರ್ತರು ಸುದ್ದಿ ಸಂಗ್ರಹಿಸಲು ಅವಕಾಶವಿಲ್ಲ. ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು ಎಂದು ನಾಮಫಲಕ ಅಳವಡಿಸಲಾಗಿದೆ. ಇಂಥ ಘಟನೆಗಳು ಮರುಕಳಿಸುತ್ತಿರುವುದು ಬೇಸರದ ಸಂಗತಿಯಾಗಿದ್ದ್ದು ಪತ್ರಕರ್ತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ತಕ್ಷಣ ವಜಾ ಮಾಡಬೇಕು. ಪತ್ರಕರ್ತರು ಎಲ್ಲ ಕಚೇರಿಗಳಿಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ವರದಿ ಮಾಡಲು ತೆರಳುವುದು ಕಷ್ಟವಾಗುತ್ತದೆ. ಇದರಿಂದ ಎಲ್ಲೆಡೆ ಕಾನೂನಿನಂತೆ ಮುಕ್ತವಾಗಿ ಮಾಹಿತಿ ಸಂಗ್ರಹಿಸಲು ಅವಕಾಶ ನೀಡಬೇಕು. ಸಾರ್ವಜನಿಕರ ಹಿತಕ್ಕೆ ಧಕ್ಕೆಯುಂಟುಮಾಡುವ, ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶಂಕರ ನಾಯ್ಕ, ವಿಷ್ಣು ದೇವಾಡಿಗ, ರಾಘವೇಂದ್ರ ಭಟ್, ಸುಬ್ರಮಣ್ಯ ಭಟ್, ಮನಮೋಹನ ನಾಯ್ಕ, ವಸಂತ ದೇವಾಡಿಗ, ಜಾವೇದ, ಯಾಹ್ಯ ಹಲ್ಲಾರೆ, ಮಂಜುನಾಥ ನಾಯ್ಕ, ಉದಯ ನಾಯ್ಕ, ಪ್ರಸನ್ನ ಭಟ್, ರಿಜ್ವಾನ್ ಗಂಗೋಳಿ, ರಾಮಚಂದ್ರ ಕಿಣಿ, ಸಫ್ವಾನ್ ಮೋಟಿಯಾ ಮುಂತಾದವರು ಉಪಸ್ಥಿತರಿದ್ದರು.