ಭಟ್ಕಳ: ರಸ್ತೆ ಸುರಕ್ಷತೆಯ ಬಗ್ಗೆ ಜನಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದ ಯಾತ್ರೆ ಹೊರಟಿರುವ 41 ವರ್ಷ ಪ್ರಾಯದ ಸುಬ್ರಹ್ಮಣ್ಯನ್ ನಾರಾಯಣ್ರಿಗೆ ಭಟ್ಕಳದಲ್ಲಿ ರೋಟರಿ ಕ್ಲಬ್ ಸದಸ್ಯರು ಶುಕ್ರವಾರ ಸಂಜೆ ಸ್ವಾಗತ ಕೋರಿದರು.
ಸುಬ್ರಹ್ಮಣ್ಯನ್ರವರು ತಮ್ಮ 2 ತಿಂಗಳ ನಡಿಗೆಯಲ್ಲಿ 11 ರಾಜ್ಯ ಹಾಗೂ 20 ನಗರಗಳನ್ನು ತಲುಪಲಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ ದೇಶದ ನಾನಾ ರಾಜ್ಯಗಳ ರಸ್ತೆ ನಿರ್ಮಾಣ ಕಾರ್ಯದ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದಾರೆ. ಕ್ಯಾಮೆರಾ ಅಳವಡಿಸಲಾದ ಇನ್ನೋವಾ ಕಾರು ಇವರನ್ನು ಹಿಂಬಾಲಿಸಿ ಇವರ ನಡಿಗೆಯನ್ನು ರೆಕಾರ್ಡ ಮಾಡುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ದೇಶದಲ್ಲಿ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, ಕಳವಳಕಾರಿ ಬೆಳವಣಿಗೆಯಾಗಿದೆ. ತಮ್ಮ ನಡಿಗೆಯ ಅವಧಿಯಲ್ಲಿನ ಅಧ್ಯಯನಗಳನ್ನು ವರದಿ ರೂಪದಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವರಿಗೆ ಸಲ್ಲಿಸಲಾಗುವುದು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ರೋಟರಿಯನ್ ರಾಜೇಶ ನಾಯಕ್, ಶ್ರೀನಿವಾಸ ಪಡಿಯಾರ್, ರವಿ ನಂಬಿಯಾರ್, ರಾಘವೇಂದ್ರ, ಜಲಾಲುದ್ದೀನ್ ಕಾಸರಗೋಡ, ಮುಷ್ತಾಕ್ ಬಾವಿಕಟ್ಟೆ, ಜಿಶಾನ್ ಖತೀಬ್, ಪ್ರಶಾಂತ ಕಾಮತ್ ಉಪಸ್ಥಿತರಿದ್ದರು.