ಭಟ್ಕಳ: ತಾಲೂಕಿನ ಆಸರಕೇರಿಯ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವವು ವಿಜ್ರಂಭಣೆಯಿಂದ ನೆರವೇರಿತು.
ಶ್ರೀ ದೇವರ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವದ ಅಂಗವಾಗಿ ಬೆಂಗಳೂರಿನ ವೇದಮೂರ್ತಿ ಶ್ರೀ ಲಕ್ಷೀಪತಿ ಗೋಪಾಲ ಮತ್ತು ಪ್ರಧಾನ ಅರ್ಚಕ ಮುರಳಿಧರ ಅಯ್ಯಂಗಾರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಾಸ್ತು ರಾಕ್ಷೋಘ್ನ ಹೋಮ, ಕಲಾವೃದ್ದಿ ಹೋಮ, ಕಳಶಾಭಿಷೇಕ ನಡೆಯಿತು. ಸೋಮವಾರ ಬೆಳಿಗ್ಗೆ ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತಾಧಿಗಳು ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದರು, ನಂತರ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಂಜೆ ನಡೆದ ಹರಿಸೇವಾ ಕುಣಿತ ಜನಮನ ಸೂರೆಗೊಂಡವು. ಧಾರ್ಮಿಕ ವಿಧಿವಿಧಾನದನ್ವಯ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿಯು ದೇವಸ್ಥಾನಕ್ಕೆ ಆಗಮಿಸಿತು. ರಾತ್ರಿ ಕುಂದಾಪುರದ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ `ಎಂತಾದ್ರೋ ಬಿಡುದಿಲ್ಲ' ಎಂಬ ನಾಟಕ ನೆರೆದವರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.