ಬೆಂಗಳೂರು: ವಿದೇಶಗಳಲ್ಲಿ ನೌಕರಿ ಬಯಸುವ ಯುವ ಭಾರತೀಯರಿಗಾಗಿ ತಮ್ಮ ಸರ್ಕಾರವು ಶೀಘ್ರದಲ್ಲೇ ಕೌಶಲ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಿಳಿಸಿದರು. ಬೆಂಗಳೂರಿನಲ್ಲಿ ನಡೆಸಲಾಗುತ್ತಿರುವ ಪ್ರವಾಸಿ ಭಾರತೀಯ ದಿವಸ 2017 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ‘ನಾವು ಶೀಘ್ರದಲ್ಲೇ ಪ್ರವಾಸಿ ಕೌಶಲ ವಿಕಾಸ ಯೋಜನಾ ಹೆಸರಿನ ಕೌಶಲ ಅಭಿವೃದ್ಧಿ ಯೋಜನೆಯೊಂದನ್ನು ಜಾರಿಗೊಳಿಸಲಿದ್ದೇವೆ. ವಿದೇಶಗಳಲ್ಲಿ ನೌಕರಿ ಪಡೆಯಬಯಸುವ ಯುವಕರನ್ನು ಗುರಿಯಾಗಿ ಇಟ್ಟುಕೊಂಡೇ ಈ ಯೋಜನೆಯನ್ನು ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.
ಹೊಸ ಪಿಐಒ (ಭಾರತೀಯ ಮೂಲದ ವ್ಯಕ್ತಿ- ಪರ್ಸನ್ ಆಫ್ ಇಂಡಿಯನ್ ಒರಿಜಿನ್) ಕಾರ್ಡ್ನ್ನು ಬಿಡುಗಡಿಗೊಳಿಸಿದ ಪ್ರಧಾನಿಯವರು ಪಿಐಒ ಕಾರ್ಡ್ ಇನ್ನು ಮುಂದೆ ಭಾರತದ ಜೊತೆಗಿನ ಬಾಂಧವ್ಯಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಪಾಸ್ಪೋರ್ಟ್ನ್ನು ರದ್ದು ಪಡಿಸಲಿದೆ ಎಂದು ಪ್ರಧಾನಿ ನುಡಿದರು. ಪಿಐಒ ಕಾರ್ಡ್ನ್ನು ಕಂಡೊಡನೆಯೇ ನಾವು ಪಾಸ್ಪೋರ್ಟಿನ ಬಣ್ಣವನ್ನು ಕಾಣವುದಿಲ್ಲ, ಬದಲಿಗೆ ರಕ್ತ ಬಾಂಧವ್ಯವನ್ನು ನೋಡುತ್ತೇವೆ’ ಎಂದು ಗಡಚಿಕ್ಕುವ ಕರತಾಡನದಗಳ ಮಧ್ಯೆ ಪ್ರಧಾನಿ ಹೇಳಿದರು.
ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ವಾಪಸಾದುದನ್ನು ಉಲ್ಲೇಖಿಸಿದ ಮೋದಿ, ‘ಮಹಾನ್ ಪ್ರವಾಸಿಗಳಲ್ಲಿ ಒಬ್ಬರಾದ ಮಹಾತ್ಮ ಗಾಂಧಿಯವರು ಭಾರತಕ್ಕೆ ಹಿಂದಿರುಗಿದ ದಿನ ಇದು. ತಮ್ಮ ಸರ್ಕಾರದ ಗುರಿ ‘ಬ್ರೇನ್ ಡ್ರೇನ್ ಅನ್ನು ಬ್ರೇನ್ ಗೈನ್’ ಆಗಿ ಮಾರ್ಪಡಿಸುವುದೇ ಆಗಿದೆ ಎಂದು ನುಡಿದರು.
ಅನಿವಾಸಿ ಭಾರತೀಯರು (ಎನ್ಆರ್ಐ) ಮತ್ತು ಪಿಐಒಗಳಿಂದ ಅಮೋಘ ಕಾಣಿಕೆ ಪ್ರಾಪ್ತಿಯಾಗಿದೆ. ಅಂತಹವರಲ್ಲಿ ಮಹಾನ್ ವ್ಯಕ್ತಿತ್ವದ ರಾಜಕಾರಣಿಗಳು, ಮಹಾನ್ ಗೌರವದ ವಿಜ್ಞಾನಿಗಳು, ಅಪ್ರತಿಮ ವೈದ್ಯರು, ಬುದ್ಧಿವಂತ ಶಿಕ್ಷಣ ತಜ್ಞರು, ಆರ್ಥಿಕ ತಜ್ಞರು, ಪತ್ರಕರ್ತರು, ಗಾಯಕರು, ಇಂಜಿನಿಯರ್ಗಳು, ಬ್ಯಾಂಕ್ ಸಿಬ್ಬಂದಿ ಮತ್ತು ನಮ್ಮ ಸುಪರಿಚಿತ ತಂತ್ರಜ್ಞಾನ ವೃತ್ತಿ ನಿರತರು ಸೇರಿದ್ದಾರೆ ಎಂದು ಪ್ರಧಾನಿ ಹೇಳಿದರು.
ಪಿಐಒ ಕಾರ್ಡ್ಗಳನ್ನು ಹೊಂದಿರುವ ಎಲ್ಲ ವ್ಯಕ್ತಿಗಳನ್ನೂ ತಮ್ಮ ಕಾರ್ಡ್ಗಳನ್ನು ಓಸಿಐ (ಓವರ್ಸೀಸ್ ಇಂಡಿಯನ್ ಸಿಟಿಜನ್ಸ್) ಕಾರ್ಡ್ಗಳಾಗಿ ಪರಿವರ್ತಿಸಿಕೊಳ್ಳುವಂತೆ ನಾನು ಆಗ್ರಹ ಪಡಿಸುವೆ. ಪಿಐಒ ಕಾರ್ಡಗಳನ್ನು ದಂಡವಿಲ್ಲದೆ ಒಸಿಐ ಕಾರ್ಡ್ಗಳಾಗಿ ಪರಿವರ್ತಿಸಿಕೊಳ್ಳುವ ಕಾಲಾವಧಿಯನ್ನು ನಾವು 2016ರ ಡಿಸೆಂಬರ್ 31ರಿಂದ 2017ರ ಜೂನ್ 30ರವರೆಗೆ ವಿಸ್ತರಿಸಿದ್ದೇವೆ ಎಂದು ಅವರು ನುಡಿದರು.
ಎಫ್ಡಿಐ ಎಂಬುದಕ್ಕೆ ನನ್ನ ಬಳಿ ಎರಡು ಅರ್ಥಗಳಿಗೆ. ಒಂದು ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ (ವಿದೇಶೀ ನೇರ ಹೂಡಿಕೆ), ಇನ್ನೊಂದು ‘ಫಸ್ಟ್ ಡೆವಲಪ್ ಇಂಡಿಯಾ’ (ಮೊದಲು ಭಾರತವನ್ನು ಅಭಿವೃದ್ಧಿ ಪಡಿಸಿ) ಎಂದು ವಿವರಿಸಿದ ಮೋದಿ, ತೊಂದರೆಯಲ್ಲಿ ಸಿಲುಕಿದ ಅನಿವಾಸಿ ಭಾರತೀಯರ ಸಾಮಾಜಿಕ ಮಾಧ್ಯಮದ ಮೂಲಕ ನೆರವಾಗುತ್ತಿರುವುದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಶ್ಲಾಘಿಸಿದರು.
ಕಾಳಧನದ ‘ರಾಜಕೀಯ ಪೂಜಾರಿ’ಗಳನ್ನು ಟೀಕಿಸಿದ ಪ್ರಧಾನಿ ಮೋದಿ, ಕಾಳಸಂತೆ ವಿರುದ್ಧ ಕ್ರಮ ಕೈಗೊಂಡ ತನ್ನ ಕ್ರಮವನ್ನು ಟೀಕಿಸುತ್ತಿರುವ ರಾಜಕೀಯ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಳಸಂತೆ ವಿರುದ್ಧದ ಕ್ರಮ, ನೋಟು ರದ್ದತಿ ಕ್ರಮವನ್ನು ಭಾರತದ ಜನ ಸಮೂಹದ ಜೊತೆಗೆ ಅನಿವಾಸಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ ಎಂದು ಶ್ಲಾಘಿಸಿದರು.