ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅಂಜುಮಾನ್ ಶಿಕ್ಷಣ ಸಂಸ್ಥೆ 22 ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಾ ಮುಂಚೂಣಿಯಲ್ಲಿದೆ ಎಂದು ರಾಜ್ಯದ ಕಂದಾಯ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು.
ಅವರು ಇಲ್ಲಿನ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲಿ ಇಂತಹ ಒಂದು ಉತ್ತಮ ವಿದ್ಯಾ ಸಂಸ್ಥೆಗಳು ದೇಶದಲ್ಲಿಯೇ ವಿರಳ ಎಂದ ಅವರು ಭಟ್ಕಳದಂತಹ ಊರಿನಲ್ಲಿ ಸುಮಾರು ನೂರು ವರ್ಷದ ಹಿಂದೆ ಜನರ ವಿದ್ಯಾಭ್ಯಾಸದ ಕುರಿತು ಚಿಂತೆ ಮಾಡುವವರು ಇರಲಿಲ್ಲ ಎಂದರೂ ತಪ್ಪಿಲ್ಲ. ಅಲ್ಲದೇ ಮುಸ್ಲಿಂ ಸಮುದಾಯದಲ್ಲಿ ಅತೀ ಕಡಿಮೆ ಜನರು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಂತಹ ಸಮಯದಲ್ಲಿಯೇ ತಮ್ಮ ದೂರದೃಷ್ಟಿತ್ವದಿಂದ ಒಂದು ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಬೇಕಾಗಿತ್ತದೆ. ಒಂದು ಅಂಕಿ ಅಂಶದ ಪ್ರಕಾರ 6 ರಿಂದ 14 ವರ್ಷದೊಳಗಿನ ಮುಸ್ಲಿಂ ಮಕ್ಕಳು ಶಾಲೆಗೇ ಹೋಗುವುದಿಲ್ಲವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೋರ್ವರೂ ವಿದ್ಯೆಗೆ ಮಹತ್ವ ಕೊಡುವುದರಿಂದ ಎಲ್ಲಾ ವರ್ಗದ ಜನರೂ ವಿದ್ಯೆಯನ್ನು ಕಲಿಯುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಗುಣಮಟ್ಟದ ಶಿಕ್ಷಣಕ್ಕೆ ಅತ್ಯಂತ ಮಹತ್ವವಿದ್ದು ಪ್ರತಿಯೋರ್ವರೂ ಕೂಡಾ ಆ ಕುರಿತು ಚಿಂತಿಸಬೇಕಾಗಿದೆ ಎಂದ ಅವರು ಹಿಂದೆ ಶ್ರೀಮಂತರೂ ಕೂಡಾ ವಿದ್ಯೆ ಕಲಿಯುತ್ತಿರಲಿಲ್ಲ. ಆದರೆ ಇಂದು ಶಿಕ್ಷಣ ಮತ್ತು ಆರೋಗ್ಯ ಪ್ರತಿಯೋರ್ವರೂ ಆದ್ಯತೆಯ ಮೇಲೆ ಕಾಪಾಡಿಕೊಂಡು ಬರಬೇಕಾಗಿದೆ ಎಂದರು.
ಅಂಜುಮಾನ್ ಸಂಸ್ಥೆ ಈಗಾಗಲೇ ಅನೇಕ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು ಮಹಿಳೆಯರ ಶಿಕ್ಷಣಕ್ಕೂ ಕೂಡಾ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯರಿದ್ದು ಅವರಿಗೆ ಶಿಕ್ಷಣ ಕೊಡಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ ಅಂತಹ ಕಾರ್ಯ ಅಂಜುಮಾನ್ ಮಾಡುತ್ತಿದೆ ಎಂದರು.
ನಮ್ಮ ದೇಶದ ಹೆಮ್ಮ ಯುವಜನತೆಯಾಗಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ನೋಡಿದರೆ ವಯಸ್ಸಾದವರ ಸಂಖ್ಯೆಯೇ ಹೆಚ್ಚಿದೆ. ಆದರೆ ನಮ್ಮ ಭಾರತ ಯುವಕರ ದೇಶವಾಗಿದೆ. ಮುಂದಿನ ದಿನಗಳಲ್ಲಿ ಭಾರತ ಅತೀ ಹೆಚ್ಚು ಯುವ ಜನರು ಇರುವ ದೇಶವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಯುವ ಜನರು ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದೂ ಕರೆ ನೀಡಿದರು.
ಭಟ್ಕಳದ ಅಂಜುಮಾನ್ ಸಂಸ್ಥೆ ಮೆಡಿಕಲ್ ಕಾಲೇಜನ್ನು ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ಆಲಿಸಿ ಉತ್ತರಿಸಿದ ಅವರು ಈ ಹಿಂದೆ ಮೆಡಿಕಲ್ ಕಾಲೇಜು ಮಾಡಿದ್ದಲ್ಲಿ ಉತ್ತಮವಾಗಿತ್ತು. ಆದರೆ ಇಂದು ಮೆಡಿಕಲ್ ಕಾಲೇಜುಗಳೂ ಕೂಡಾ ಹಿನ್ನೆಡೆಯನುಭವಿಸುತ್ತಿವೆ. ಮೆಡಿಕಲ್ ಕಾಲೇಜು ಮಾಡುವುದು ಕೂಡಾ ಕಷ್ಟಕರವಾದ ಕಾರ್ಯವಾಗಿದೆ. ಆದರೆ ಅಂಜುಮಾನ್ ಸಂಸ್ಥೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾದರೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದೂ ಭರವಸೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನತೆಗೆ ಅತ್ಯವಿರುವ ಶಿಕ್ಷಣ ಕೊಡಬೇಕು. ಇಂದು ಹೊಸ ಹೊಸ ಕೋರ್ಸುಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು ಎಂದು ಹೇಳಿದ ಅವರು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂತೆ ಕರೆ ನೀಡಿದರು. ನಾವು ರಾಷ್ಟ್ರ ಕಟ್ಟುವ, ರಾಷ್ಟ್ರದ ಪ್ರಗತಿಗೆ ಸಹಾಯ ಮಾಡುವವನ್ನು ತಯಾರು ಮಾಡುವ ಶಿಕ್ಷಣ ಕೊಡಬೇಕಾಗಿದೆ ಎಂದೂ ದೇಶಪಾಂಡೆ ಹೇಳಿದರು.