ಅಂಜುಮನ್ ಸಂಸ್ಥೆಯ ಪ್ರತಿಷ್ಠಿತ ’ವಕಾರೆ ಅಂಜುಮನ್’ ’ವಕಾರೆ ಇಸ್ಲಾಮಿಯ’ ಪ್ರಶಸ್ತಿ ಪ್ರದಾನ
ಭಟ್ಕಳ: ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡು ಅತ್ಯುನ್ನತ ’ವಕಾರೆ ಇಸ್ಲಾಮಿಯಾ’ ಹಾಗೂ ವಕಾರೆ ಅಂಜುಮನ್’ ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಜರಗಿತು.
ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆಯ ಪ್ರತಿಭಾವಂತ ವಿದ್ಯರ್ಥಿ ಮುಹಮ್ಮದ್ ಇಮ್ರಾನ್ ಜೈಲಾನಿ ಅಕ್ರಮಿ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಅಮೀರ್ ಮಝಹರ್ ಮುಹಿದ್ದೀನ್ ಮುಅಲ್ಲಿಮ್ ಪ್ರತಿಷ್ಟಿತ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.
ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಡಾ.ಸೈಯ್ಯದ್ ಕದೀರ್ ನಾಝಿಮ್ ಸರ್ಗಿರೋ ಮಾತನಾಡಿ, ಶಿಕ್ಷಣ ಸೇವೆಯಲ್ಲಿ ಶತಮಾನಗಳನ್ನು ಪೂರೈಸಿದ ಅಂಜುಮನ್ ಸಂಸ್ಥೆ ಈ ನಾಡಿಗ ಮಹಾನ್ ಕೊಡುಗೆಯನ್ನು ನೀಡುತ್ತಿದೆ. ಶಿಕ್ಷಣವು ಯಶಸ್ಸನ್ನು ಗಳಿಸಲಿಕ್ಕಾಗಿ ಇರುವುದಲ್ಲ ಬದಲಿಗೆ ಅದು ಜ್ಞಾನವನ್ನು ಗಳಿಸಲು ಇರುವಂತದ್ದು ಆದ್ದರಿಂದ ಶಿಕ್ಷಣದಿಂದ ಕೇವಲ ಹಣ ಗಳಿಸುವ ಉದ್ದೇಶವಿಟ್ಟುಕೊಂಡರೆ ಅದನ್ನು ನಿಮ್ಮ ಯೋಚನೆಗಳಿಂದ ತೆಗೆದು ಹಾಕಿ. ಜ್ಞಾನಾರ್ಜನೆಯೇ ಶಿಕ್ಷಣದ ಮೂಲ ಉದ್ದೇಶವಾಗಿರಬೇಕು. ಜ್ಞಾನದಿಂದ ಹಣ ತನ್ನಿಂದತಾನೆ ಬರುತ್ತದೆ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ್ ಅಬ್ದುಲ್ ರಹ್ಮಾನ್ ಬಾತಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇಸ್ಲಾಮಿ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೇದಾರ್ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಹಿದ್ದೀನ್ ಖತ್ತಾಲಿ ಪ್ರತ್ಯೇಕವಾಗಿ ವಾರ್ಷಿಕ ವರದಿಯನ್ನು ವಾಚಿಸಿದರು. ಹೆಚ್ಚುವರಿ ಪ್ರಧಾನ ಕಾರ್ಯರ್ಧಿ ಮುಹಮ್ಮದ ಇಸ್ಹಾಖ್ ಶಾಬಂದ್ರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ರಷೀದ್ ಮಿರ್ಜಾನಿ ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಉದ್ಯಮಿ ಖಮರ್ ಸಾದಾ, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹೀಮ್ ದಾಮೂದಿ, ಪ್ರೌಢಶಾಲೆಗಳ ಕಾರ್ಯದರ್ಶಿ ಅಬ್ದುಲ್ ವಹಾಬ್ ಕೋಲಾ, ಇಸ್ಮಾಯಿಲ್ ಸಿದ್ದಿಖಿ, ತಾಜುದ್ದೀನ್ ಅಸ್ಕರಿ ಮುಂತಾದವರು ಉಪಸ್ಥಿತರಿದ್ದರು.