ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ; ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ
ಭಟ್ಕಳ: ತನ್ನ ನಿಯಂತ್ರಣವನ್ನು ಕಳೆದುಕೊಂಡ ಬೈಕೊಂದು ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗ್ರಾಮೀಣ ಪೊಲೀಸ್ ವ್ಯಾಪ್ತಿಯ ವೆಂಕಟಾಪುರ ಸೇತುವೆ ಬಳಿ ರಾ.ಹೆ.66ರಲ್ಲಿ ಮಂಗಳವಾರ ನಡೆದಿದೆ.
ಮೃತ ಬೈಕ ಸವಾರನನ್ನು ಬೆಳಕೆಯ ಮೋಗೇರಕೇರಿ ನಿವಾಸಿ ಮಿಥುನ ಕೋರ್ಗ ಮೋಗೇರ (21) ಎಂದು ಗುರುತಿಸಲಾಗಿದೆ.
ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯಕ್ಕೆ ಮುಂದಿನ ಹೋರಾಟ ಬಗ್ಗೆ ಇಲ್ಲಿನ ಶಿರಾಲಿ ಅಳ್ವೇಕೋಡಿಯಲ್ಲಿ ಟ್ರೋಲ್ ಚಾಲಕ ಹಾಗೂ ಮೀನುಗಾರರ ಸಭೆ ಇದ್ದ ನಿಮಿತ್ತ ಈತ ತನ್ನ ಅಜ್ಜಿ ಮನೆ ಕರಿಕಲ್ನಿಂದ ಸಭೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ವೆಂಕಟಾಪುರ ಸೇತುವೆಯ ಸಮೀಪ ಬೇರೊಂದು ವಾಹನವನ್ನು ಓವರ ಟೇಕ್ ಮಾಡುವ ಭರದಲ್ಲಿ ಸವಾರನಿಗೆ ಬೈಕ್ ನಿಯಂತ್ರಣಕ್ಕೆ ಸಿಗಲಿಲ್ಲವಾಯಿತು. ಇದರಿಂದ ಬೈಕ್ ಸ್ಕೀಡ್ ಆಗಿ ನೆಲಕ್ಕುರುಳಿದ್ದು ಸವಾರನ ತಲೆ ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ನಂತರ ಸ್ಥಳಕ್ಕೆ ತೆರಳಿದ ಗ್ರಾಮೀಣ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಈ ಬಗ್ಗೆ ಸ್ಥಳಿಯ ಪ್ರತ್ಯಕ್ಷದರ್ಶಿಯಾದ ಉಪೇಂದ್ರ ಮೋಗೇರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಬೈಕ ಸವಾರನ ಮೃತ ದೇಹವನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಘಟನೆಯ ತಿಳಿದ ಬಳಿಕ ಅಳ್ವೇಕೋಡಿಯಲ್ಲಿ ನಡೆಯುತ್ತಿದ್ದ ಟ್ರೋಲ್ ಬೋಟ್ ಚಾಲಕರ ಹಾಗೂ ಮೀನುಗಾರರ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಸಭೆಯನ್ನು ರದ್ದುಗೊಳಿಸಿ ಸರಕಾರಿ ಆಸ್ಪತ್ರೆಗೆ ನೂರಾರು ಮೀನುಗಾರರು ಧಾವಿಸಿದರು. ನಂತರ ಮೃತ ಯುವಕನ ಶವದ ಮರಣೊತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.