ನ.೨೧ ರಂದು ವಿಶ್ವ ಮೀನುಗಾರಿಕಾ ದಿನಾಚರಣೆ;೩೦೦ಮತ್ಸ್ಯ ವಾಹಿನಿ ವಿತರಣೆ-ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ
ಭಟ್ಕಳ: ರಾಜ್ಯದಲ್ಲಿ ಪ್ರಥಮಬಾರಿಗೆ ಎನ್ನುವಂತೆ ನ.೨೧ ರಂದು ರಾಜ್ಯಮಟ್ಟದ ವಿಶ್ವ ಮೀನುಗಾರಿಕಾ ದಿನಾಚರಣೆ ಆಚರಿಸುತ್ತಿದ್ದು ೩೦೦ ಪರಿಸರ ಸ್ನೇಹಿ ತ್ರೀಚಕ್ರ ವಾಹನ ಮತ್ಸ್ಯ ವಾಹಿನಿ ವಿತರಣೆ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಮಾಂಕಾಳ್ ವೈದ್ಯ ಹೇಳಿದರು.
ಅವರು ರವಿವಾರ ಭಟ್ಕಳದಲ್ಲಿ ಸಚಿವರ ಕಾರ್ಯಲಯದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ವಿಶ್ವಮೀನುಗಾರಿಕೆ ದಿನಾಚರಣೆ-೨೦೨೩ರ ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ಮತ್ಸ್ಯೋದ್ಯಮಕ್ಕೆ ಪ್ರೋತ್ಸಾಹ ಹಾಗೂ ನಿರೂದ್ಯೋಗ ನಿವಾರಣೆಯ ದೃಷ್ಟಿಯಿಂದ ರಾಜ್ಯದಲ್ಲಿ ೩೦೦ ಮತ್ಸ್ಯವಾಹಿನಿಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿತರಿಸಲಿದ್ದಾರೆ. ಸಧ್ಯಕ್ಕೆ ಬೆಂಗಳೂರಿನ ಪ್ರತಿ ವಾರ್ಡುಗಳಲ್ಲಿ ಮತ್ಸ್ಯವಾಹಿನಿ ಕಾರ್ಯಚರಿಸಲಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಗತ್ಯನುಸಾರ ಮತ್ಸ್ಯವಾಹಿನಿ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸುಮಾರು ೮ಲಕ್ಷಕ್ಕೂ ಅಧಿಕ ಮೌಲ್ಯದ ಈ ವಾಹಿನಿಯಲ್ಲಿ ಮೀನು ಮಾರಾಟ ಮಾಡಲು ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಕಚ್ಚಾಮೀನು ಅಲ್ಲದೆ ಮೀನು ಪ್ರೈ ಮಾಡಿ ಮಾರಾಟಕ್ಕೂ ಕೂಡ ವ್ಯವಸ್ಥೆ ಇದೆ ಎಂದರು.
ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಇಡೀ ಮಂತ್ರಿಮಂಡಲವೇ ಶ್ರಮಪಡುತ್ತಿದೆ. ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಐದನೆ ಗ್ಯಾರಂಟಿ ಯುವನಿಧಿಯನ್ನು ರಾಜ್ಯದ ಯುವಜನತೆಗೆ ಹೊಸವರ್ಷದ ಕೊಡುಗೆಯಾಗಿ ನೀಡಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗೃಹಲಕ್ಷ್ಮಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿದೆ. ಕೆಲ ತಾಂತ್ರಿಕತೊಂದರೆಗಳ ಹೊರತು ಪಡಿಸಿ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ದೊರೆಯುತ್ತಿದೆ ಎಂದರು.
ಪಂಚರಾಜ್ಯಗಳ ಚುನಾವಣೆಯನ್ನು ಕಾಂಗ್ರೇಸ್ ಪಕ್ಷ ಗೆಲ್ಲುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅಲ್ಲೋ ವರ್ಕ್ ಮಾಡಿವೆ. ಪಂಚರಾಜ್ಯಗಳಷ್ಟೇ ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಯನ್ನೂ ನಾವೇ ಗೆಲ್ಲುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಭಟ್ಕಳ ಹೆಬಳ ಪಂಚಾಯತ್ ವ್ಯಾಪ್ತಿಯ ತ್ಯಜ್ಯವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ತಾಲೂಕು ಪಂಚಾಯತ್ ಮಟ್ಟದಲ್ಲಿ ೫ಎಕರೆ ಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಇದರಿಂದಾಗಿ ಎಲ್ಲ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಜಿಲ್ಲೆಯಲ್ಲಿ ಅತಿಕ್ರಮಣ ಸಮಸ್ಯೆ, ಭಟ್ಕಳ ಮಲ್ಲಿಗೆ, ಹಾಗೂ ಮತ್ಸ್ಯ ಕ್ಷಾಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ವಿಠಲ್ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷ ನಯನಾ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ ಮತ್ತಿತರರು ಇದ್ದರು.
ಇತ್ತಿಚೆಗೆ ತಂಝೀಮ್ ಸಂಸ್ಥೆಯು ಆಯೋಜಿಸಿದ್ದ ಪ್ಯಾಲೆಸ್ತೇನಿಯನ್ನರ ಪರ ಮೌನ ಪ್ರತಿಭಟನೆಯನ್ನು ಉ.ಕ ಜಿಲ್ಲಾ ಬಿಜೆಪಿ ಘಟಕ ವಿರೋಧ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ಮೋದಿಯವರೇ ಸ್ವತಃ ಪ್ಯಾಲೇಸ್ತೇನಿಯನ್ನರ ಪರವಾಗಿದ್ದಾರೆ ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಕೇಳಿದ್ದು ಇದಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ಪ್ಯಾಲೆಸ್ತೀನ್ ಪರವಾಗಿದ್ದರೆ ಉ.ಕ ಜಿಲ್ಲಾ ಬಿಜೆಪಿಗರು ಬೇರೆಯೇ ಲೋಕದಲ್ಲಿದ್ದಾರೆ. ಇಡೀ ದೇಶದ ಬಿಜೆಪಿ ಒಂದೆಡೆ ಇದ್ದರೆ ಕರಾವಳಿಯ ಬಿಜೆಪಿಯೆ ಬೇರೆ ಯಾಗಿದೆ ಜಗತ್ತಿನಲ್ಲಿ ಶಾಂತಿ ನೆಲಸಬೇಕು ಎಂಬುದು ಎಲ್ಲ ಭಾರತೀಯರ ಬಯಕೆ ಅಮಾಯಕರ ಜೀವ ಬಲಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂತೃಸ್ತರ ಪರವಾಗಿ ನಿಲ್ಲುವುದು ಸಹನುಭೂತಿ ವ್ಯಕ್ತಪಡಿಸುವುದು ಯಾವುದೇ ದೃಷ್ಟಿಯಿಂದಲೂ ತಪ್ಪಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಚಾಳಿ ಕೆಲವರಿಗೆ ಇದೆ. ಅದು ಅಭ್ಯಾಸಬಲ. ಇದಕ್ಕೇನು ಮಾಡಲು ಸಾಧ್ಯವಿಲ್ಲ ಎಂದು ಸಚಿವ ಮಾಂಕಾಳ್ ವೈದ್ಯ ಪ್ರತಿಕ್ರಿಯಿಸಿದ್ದಾರೆ.