ಗೋವಾ ಪ್ರವೇಶಕ್ಕೆ ಎರಡು ಸಾವಿರ. ಕರ್ನಾಟಕ-ಗೋವಾ ಗಡಿಯಲ್ಲಿ ಪ್ರತಿಭಟನೆ.
ಕಾರವಾರ : ಗೋವಾ ಗಡಿಯನ್ನ ಪ್ರವೇಶ ಮುಕ್ತ ಮಾಡಬೇಕೆಂದು ಆಗ್ರಹಿಸಿ ಇಂದು ಮಾಜಾಳಿ ಚೆಕ್ ಪೋಸ್ಟ್ ಬಳಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಾಟಾಳ್ ಪಕ್ಷ, ಕನ್ನಡ ರಕ್ಷಣಾ ವೇದಿಕೆ, ಟ್ಯಾಕ್ಸಿ ಯುನಿಯನ್ ಸೇರಿ ವಿವಿಧ ಸಂಘಟನೆ ನೇತೃತ್ವದಲ್ಲಿ ಕರ್ನಾಟಕ ಮತ್ತು ಗೋವಾ ಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಹೊತ್ತು ಪ್ರತಿಭಟಿಸಿದ ಕಾರ್ಯಕರ್ತರು ಗೋವಾ ಸರ್ಕಾರದ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದ್ರು.
ಕೋವಿಡ್ 19 ನಿಂದಾಗಿ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನ ಮಾರ್ಗಸೂಚಿಯಂತೆ ತೆಗೆದು ಹಾಕಲಾಗಿದೆ. ಆದ್ರೆ ಗೋವಾ ಸರ್ಕಾರ ಕರ್ನಾಟಕದಿಂದ ಪ್ರವೇಶಿಸುವ ಜನರಿಗೆ 2 ಸಾವಿರ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ವಿನಾಕಾರಣ ವಸೂಲಿ ಮಾಡುತ್ತಿದೆ ಎಂದರು.
ಹೀಗಾಗಿ ಕೂಡಲೆ ಗೋವಾಕ್ಕೆ ತೆರಳಲು ಪ್ರವೇಶ ಮುಕ್ತಮಾಡಬೇಕು. ಇಲ್ಲದಿದ್ದಲ್ಲಿ ಸಪ್ಟೆಂಬರ್ 5ರಂದು ಪುನಃ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಗೋವಾದಿಂದ ಕರ್ನಾಟಕ ಪ್ರವೇಶಿಸುವ ವಾಹನಗಳನ್ನ ಗಡಿಯಲ್ಲಿ ತಡೆದು ವಾಪಾಸ್ ಕಳಿಸುತ್ತೆವೆಂದು ಹೇಳಿದ್ದಾರೆ.
ಈ ಬಗ್ಗೆ ಗೋವಾ ಕಾಣಕೋಣದ ಡೆಪ್ಯುಟಿ ಕಲೆಕ್ಟರ್ ರಾಜೇಶ ಪ್ರಭು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಿಂದಾಗಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.