ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ

Source: S O News | By I.G. Bhatkali | Published on 29th May 2024, 2:03 AM | Coastal News | Special Report |

ಭಟ್ಕಳ: ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ಅಪ್ಪಳಿಸಿದ್ದು, ಪ್ರವಾಸಿ ತಾಣ ತತ್ತರಿಸಿ ಹೋಗಿದೆ.

ಮುರುಡೇಶ್ವರದಲ್ಲಿ ರವಿವಾರ ಒಂದೂವರೆ ಕಿಲೋಮೀಟರ್ ದೂರದವರೆಗೆ ವಾಹನ ದಟ್ಟಣೆ ನಿರ್ಮಾಣವಾಗಿದ್ದು, ನಡೆದಾಡಲೂ ಸಾಧ್ಯವಾಗದ ದೃಶ್ಯ ಕಂಡು ಬಂದಿದೆ. ರವಿವಾರ ಹೊತ್ತು ನೆತ್ತಿಗೇರುವ ಹೊತ್ತಿಗೆ ಮುರುಡೇಶ್ವರ ದೇವಾಲಯದ ಆವರಣದಲ್ಲಿ ಜನಜಂಗುಳಿ ಮಿತಿ ಮೀರಿತು. ಶಿವನ ದರ್ಶನಕ್ಕೆ ಜನರು ಮುಗಿ ಬಿದ್ದ ಕಾರಣ ಗೋಪುರ ಪ್ರವೇಶ ದ್ವಾರದಿಂದ ದೇವಾಲಯದ ಮಹಾದ್ವಾರದವರೆಗೂ ನೂಕುನುಗ್ಗಲು ಉಂಟಾಯಿತು. ಅಂಕೆ ಮೀರಿದ ಜನ ಪ್ರವಾಹದಿಂದಾಗಿ ಸ್ವಲ್ಪ ಹೊತ್ತು ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. 

ಕಡಲ ತೀರದಲ್ಲಿಯೂ ಕೂಗಾಟ, ಚೀರಾಟ:
ಮುರುಡೇಶ್ವರ ಕಡಲ ತೀರದಲ್ಲಿಯೂ ಸಹಸ್ರಾರು ಜನರು ಸೇರಿದ್ದು, ಕಡಲ ಆರ್ಭಟದ ಶಬ್ದವನ್ನೂ ಮೀರಿ ಪ್ರವಾಸಿಗರ ಕೂಗಾಟ ಚೀರಾಟ ಕೇಳಿ ಬರುತ್ತಲೇ ಇತ್ತು. ಸಮುದ್ರದ ನೀರು ಮೇಲೆ ಉಕ್ಕಿ ಹರಿಯುವ ಉತ್ಸಾಹ ತೋರುತ್ತಿದ್ದರೂ, ಸಾವು ನೋವು ಎಲ್ಲವನ್ನೂ ಕಡೆಗಣಿಸಿ ಪ್ರವಾಸಿಗರು ನೀರಿನಲ್ಲಿ ಆಟ ಸುರುವಿಟ್ಟುಕೊಂಡಿದ್ದರು. ಸಂಭಾವ್ಯ ಅಪಘಾತವನ್ನೂ ನಿರ್ಲಕ್ಷಿಸಿ ಸಮುದ್ರದ ಬೇಲೆಯ ಮೇಲೆಯೇ ಪ್ರವಾಸಿಗರ ವಾಹನ ಓಡಾಡುತ್ತಲೇ ಇದ್ದವು. 

ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿಸಿದ ಶಕ್ತಿ :
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭವನ್ನು ಪಡೆದುಕೊಂಡು ತಂಡೋಪತಂಡವಾಗಿ ಮುರುಡೇಶ್ವರಕ್ಕೆ ಆಗಮಿಸುವುದನ್ನು ಮುಂದುವರೆಸಿದ್ದಾರೆ. ಭಟ್ಕಳ ಹಾಗೂ ಅಕ್ಕಪಕ್ಕದ ತಾಲೂಕು, ಗ್ರಾಮಗಳ ನಿವಾಸಿಗಳು ಸಮಯ ಸಿಕ್ಕಾಗಲೆಲ್ಲ ಸರಕಾರಿ ಬಸ್ ಏರುತ್ತಿದ್ದು, ಮುರುಡೇಶ್ವರ ನಾಕಿ ಅಥವಾ ಬಸ್ ನಿಲ್ದಾಣದಿಂದ ಆಟೋ ಏರಿ ದೇವಸ್ಥಾನಕ್ಕೆ ಬಂದು ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಮುರುಡೇಶ್ವರದ ಮೇಲಿನ ಒತ್ತಡ ದಿನೇ ದಿನೇ ಹೆಚ್ಚಾಗತೊಡಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎನ್ನುತ್ತ ಇಲ್ಲಿನ ಅಂಗಡಿಕಾರರೋರ್ವರು ಕಾರಣ ಬಿಚ್ಚಿಡುವ ಪ್ರಯತ್ನ ಮಾಡುತ್ತಾರೆ. 

ಮೂಲಭೂತ ಸೌಕರ್ಯ ಅಧೋಗತಿಗೆ:
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಮುರುಡೇಶ್ವರದಲ್ಲಿ ಮೂಲಭೂತ ಸೌಕರ್ಯ ಅಧೋಗತಿಯನ್ನು ತಲುಪಿದೆ. ವಸತಿಗೃಹಗಳು ಖಾಯಂ ಹೌಸ್‍ಫುಲ್ ಬೋರ್ಡ ಹಾಕಿಕೊಂಡರೆ, ಗಗನಕ್ಕೇರಿರುವ ರೂಮ್ ದರದಿಂದಾಗಿ ಪ್ರವಾಸಿಗರು ಬೇಲೆಯ ಮೇಲೆ ಹಗಲು ರಾತ್ರಿ ಕಳೆಯಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನ ಗೃಹವೂ ಇಲ್ಲದಿರುವುದರಿಂದ ಕಂಡಕಂಡಲಿ ಮಲಮೂತ್ರ ವಿಸರ್ಜನೆ ಆರಂಭವಾಗಿ ಬಿಟ್ಟಿದೆ. ಮುಂದೆ ಪ್ರವಾಸಿಗರು ಮುರುಡೇಶ್ವರಕ್ಕೆ ಕಾಲಿಡಲೂ ಅಸಹ್ಯ ಪಟ್ಟುಕೊಂಡರೆ ಆಶ್ಚರ್ಯ ಪಡುವಂತದ್ದೇನಿಲ್ಲ.

ಗೋವಾ ಮಾದರಿಯಲ್ಲಿ ಮುರುಡೇಶ್ವರ ಅಭಿವೃದ್ಧಿಯಾಗಲಿ:
ಮುರುಡೇಶ್ವರ ದೇವಾಲಯದ ಇಕ್ಕೆಲಗಳಲ್ಲಿ ವಿಶಾಲವಾದ ಕಡಲತೀರ ಇದ್ದರೂ, ಮುರುಡೇಶ್ವರದ ಒಟ್ಟೂ ಪ್ರವಾಸೋದ್ಯಮ ಚಟುವಟಿಕೆ ದೇವಾಲಯದ ಒಂದು ಬದಿಯಲ್ಲಿನ ಸೀಮಿತ ಒಂದೆರಡು ಕಿಲೋ ಮೀಟರ್ ವ್ಯಾಪ್ತಿ ಪ್ರದೇಶಕ್ಕೆ ಸೀಮಿತವಾಗಿದೆ. ಪ್ರವಾಸಿಗರ ಓಡಾಟ, ಜಲಕ್ರೀಡೆ, ಮೋಜಿನಾಟ ಎಲ್ಲವೂ ಅಲ್ಲಿಯೇ ಮುಗಿದು ಹೋಗುತ್ತಿದೆ. ಅದರ ಬದಲಿಗೆ ಮುರುಡೇಶ್ವರದಿಂದ ಬೈಲೂರಿನವೆರೆಗೆ, ಇತ್ತ ಮುರುಡೇಶ್ವರದಿಂದ ಸಣಬಾವಿಯವರೆಗೆ ಅಥವಾ ಅಳ್ವೆಕೋಡಿಯವರೆಗೆ ಒಟ್ಟೂ ಕಡಲ ತೀರವನ್ನು ಬಳಸಿಕೊಂಡು ಹೊಸ ಹೊಸ ಹೆಸರಿನೊಂದಿಗೆ ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರತ್ಯೇಕ ಬೀಚ್‍ಗಳು ಸಿದ್ಧವಾಗಬೇಕು. ಪ್ರತಿ ಬೀಚ್‍ನಲ್ಲಿ ವಿಭಿನ್ನ ರೀತಿಯ ಜಲಕ್ರೀಡೆ, ವಸತಿ, ಮೋಜುಮಸ್ತಿಗೆ ಅವಕಾಶ ಕಲ್ಪಿಸಬೇಕು. ಎಲ್ಲ ಬೀಚ್‍ಗಳಲ್ಲಿಯೂ ಕಡಲ ತೀರದ ಶುಚಿರುಚಿಯಾದ ಆಹಾರವನ್ನು ಪರಿಚಯಿಸಬೇಕು. ಹಾಗೆ ಮಾಡಿದರೆ ಮುರುಡೇಶ್ವರ ಸೀಮಿತ ಪ್ರದೇಶದ ಮೇಲಿನ ವಿಪರೀತ ಒತ್ತಡ ವಿಕೇಂದ್ರಿಕರಣಗೊಂಡು ಮುರುಡೇಶ್ವರ ಹಗುರವಾಗುವುದರ ಜೊತೆಗೆ ಮುರುಡೇಶ್ವರ ತನ್ನ ವೈಭವವನ್ನು ಉಳಿಸಿಕೊಳ್ಳಲಿದೆ. ಜೊತೆಗೆ ಮುರುಡೇಶ್ವರದತ್ತ ಮುಖ ಮಾಡುವ ದೇಶಿ ಪ್ರವಾಸಿಗರಷ್ಟೇ ಅಲ್ಲ, ವಿದೇಶಿ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗುವ ಅವಕಾಶ ಇದೆ. ಇದರಿಂದ ಸ್ಥಳೀಯ ಉದ್ಯೋಗಾವಕಾಶಗಳು 3 ಪಟ್ಟು ಹೆಚ್ಚಲಿವೆ. ಮುರುಡೇಶ್ವರದವರೇ ಆದ ಮಂತ್ರಿ ಮಂಕಾಳ ಸ್ವಲ್ಪ ಮುರುಸೊತ್ತು ಮಾಡಿಕೊಂಡು ಮುರುಡೇಶ್ವರದತ್ತ ಗಮನ ಹರಿಸಲಿ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ. 

Read These Next

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅಪರಾಧಿ :ನ್ಯಾಯಾಲಯ ತೀರ್ಪು

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ ಈ ...

ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಿರಂತರವಾಗಿರಲಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡುವ ಮೂಲಕ, ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ...

ಕಾರವಾರ: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಿ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

ತಿ ವರ್ಷವು ದೀಪಾವಳಿ ಹಬ್ಬವನ್ನು ಸಾಂಪ್ರ‍್ರದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...