ಕುಮಟಾ:ಸಾವಿರಾರು ಅರಣ್ಯ ಅತಿಕ್ರಮಣಕಾರರ ಬೃಹತ್ ಪ್ರತಿಭಟನೆ, ಮೆರವಣಿಗೆ:ಲೋಕಸಭೆ ಚುನಾವಣೆ ಬಹಿಷ್ಕಾರ ಚಿಂತನೆ
ಕುಮಟಾ:ಜನಪ್ರತಿನಿಧಿಗಳಿಗೆ ಅರಣ್ಯ ಅತಿಕ್ರಮಣಕಾರರು ಬೇಡದಿದ್ದರೆ, ಅತಿಕ್ರಮಣಕಾರರಿಗೂ ಅವರು ಬೇಡ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತದಾನ ಮಾಡದಿರುವ ಬಗ್ಗೆ ಚಿಂತಿಸಲಾಗುತ್ತಿದೆ’ಎಂದು ಅರಣ್ಯ ಅತಿಕ್ರಮಣಕಾರರ ಹೋರಾಟ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು.
ಕುಮಟಾದಲ್ಲಿ ಶನಿವಾರ ನಡೆದ ಅರಣ್ಯ ಅತಿಕ್ರಮಣಕಾರರ ಬೃಹತ್ ಪ್ರತಿ
ಭಟನೆಯಲ್ಲಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಟಿಬೆಟನ್ನರಿಗೆ ತಾನೇ ಭೂಮಿ ನೀಡಿ ಬದುಕಲು ಅವಕಾಶ ಮಾಡಿಕೊಟ್ಟಿದೆ. ಆದರೆ, ನಮ್ಮದೇ ದೇಶದ ಪ್ರಜೆಗಳಿಗೆ ಬದುಕು ಕಟ್ಟಿಕೊಳ್ಳಲು ಕಾನೂನಾತ್ಮಕ ಅವಕಾಶ ಕಲ್ಪಿಸಲು ಅದಕ್ಕೆ ಆಸಕ್ತಿಯಿಲ್ಲ. ಅತಿಕ್ರಮಣಕಾರರಿಗೆ ಸರ್ಕಾರ ಮನೆ ಸಂಖ್ಯೆ, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಕೊಟ್ಟಿದೆ. ಭೂಮಿ ಮಾತ್ರ ಕೊಡಲಾಗದು ಎಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.
ಅರಣ್ಯ ಅತಿಕ್ರಮಣದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಕೇಂದ್ರ ಸರ್ಕಾರದ ವಕೀಲರು ಮೂರು ಬಾರಿ ಗೈರು ಹಾಜರಾಗಿದ್ದಾರೆ. ಶಿರಸಿ ಉಪವಿಭಾಗಧಿಕಾರಿ ಒಂದೇ ದಿನ 10 ಸಾವಿರ ಅತಿಕ್ರಮಣಕಾರರ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಶಿರಸಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ 5,621 ಅತಿಕ್ರಮಣಕಾರ ಕುಟುಂಬಗಳ 3,153 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಇದ್ದವರನ್ನು ಒಕ್ಕೆಲೆಬ್ಬಿಸಲಾಗಿದೆ ಎಂದು ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿದ್ದಾರೆ. ಇಂಥ ಅಧಿಕಾರಿಗಳಿಂದ ಬಡ ಅತಿಕ್ರಣದಾರರಿಗೆ ನ್ಯಾಯ ಸಿಗುತ್ತದೆಯೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಕಾಂತ ಕೊಚರೇಕರ್, ಸುರೇಶ ಮೇಸ್ತ, ಇನಾಯತ್ ಉಲ್ಲಾ ಶಾಬಂದ್ರಿ, ನಾಸೀರ್ ಖಾನ್, ರಾಮ ಮೊಗೇರ, ಜಿ.ಎಂ.ಶೆಟ್ಟಿ ಮಾತನಾಡಿದರು.
ನಂತರ ಪಟ್ಟಣದಲ್ಲಿ ಶಾಂತಿಯುತ ಮೆರವಣಿಗೆ ಕೈಗೊಂಡು ಪೊಲೀಸರಿಂದ ಸ್ವಯಂ ಬಂಧನಕ್ಕೊಳಗಾದರು. ಸೂರಜ್ ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಮಂಜು ಮರಾಠಿ, ಮಹೇಂದ್ರ ನಾಯ್ಕ ಇದ್ದರು.