ಇಬ್ಬರು ಆರೋಪಿಗಳ ಬಂಧನ; 12 ಲಕ್ಷ ರೂ ಮೌಲ್ಯದ ಸ್ವತ್ತು ವಶ
ಭಟ್ಕಳ: ಕಳೆದ ಜೂನ್ 22 ರಂದು ರಾತ್ರಿ ನಗರದ ಪ್ರಸಿದ್ದ ಉದ್ಯಮಿ ರಿಬ್ಕೋ ಸಂಸ್ಥೆಯ ಮಾಲಿಕ ಎಸ್.ಎ ರಹ್ಮಾನ್ ಶಾಬಂದ್ರಿಯವರ ವೆಂಕಟಾಪುರದ ರಿಬ್ಕೋ ಕಾಲೋನಿಯಲ್ಲಿರುವ ಮನೆ ಕಳುವು ಪ್ರಕರಣವನ್ನು ಬೇಧಿಸಿದ ಗ್ರಾಮೀಣ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಗದು ಸೇರಿದಂತೆ 12 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜು.೧೦ ರಂದು ವಶಪಡಿಸಿಕೊಂಡಿದ್ದಾಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಶನಿವಾರ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆಗೊಳಿಸಿ ಮಾಹಿತಿಯನ್ನು ನೀಡಿದೆ.
ಬಂಧಿತ ಆರೋಪಿಗಳನ್ನು ಗುಳ್ಮಿ ಬೆಳಲಖಂಡದ ನಿವಾಸಿಗಳಾದ ಮುಹಮ್ಮದ್ ಸಾದಿಕ್ (23) ಹಾಗೂ ಮುಜಮ್ಮಿಲ್ (22) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 70 ಗ್ರಾ. ಚಿನ್ನಾಭರಣ ಅಂದಾಜು ಮೌಲ್ಯ ರೂ. ೩ಲಕ್ಷ, 428000 ರೂ ನಗದು ಹಣ, 376388 ರೂ ಮೌಲ್ಯದ ವಿದೇಶಿ ಕರೆನ್ಸಿ, 1 ಲಕ್ಷ ರೂ ಮೌಲ್ಯದ ಕೈಗಡಿಯಾರ, ಪಾಸ್ ಪೋರ್ಟ್ ಪ್ರತಿ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಹೀಗೆ ಒಟ್ಟು 1204388 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ.ಐ ಜಯಕುಮಾರ, ಡಿವೈಎಸ್ಪಿ ಶ್ರೀಕಾಂತ.ಕೆ ರವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ.ವಿ, ಪಿ.ಎಸ್.ಐ ಗಳಾದ ಶ್ರೀಧರ ನಾಯ್ಕ , ಮಯೂರ ಪಟ್ಟಣ ಶೆಟ್ಟಿ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ದೀಪಕ್ , ವಿನಾಯಕ ಪಾಟೀಲ್, ಈರಣ್ಣಾ ಪೂಜಾರಿ, ನಿಂಗನಗೌಡ ಪಾಟೀಲ್ , ವಿನೋದ ಕುಮಾರ ಜ.ಬಿ, ಚಾಲಕ ಸಿಬ್ಬಂದಿ ದೇವರಾಜ ಮೊಗೇರ, ಜಿಲ್ಲಾ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳಾದ ಉದಯ ಗುನಗಾ , ರಮೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.