ಭಟ್ಕಳ:ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದ ವೈದ್ಯನೋರ್ವ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ಭಟ್ಕಳದಲ್ಲಿ ವರದಿಯಾಗಿದೆ.
ನಾಪತ್ತೆಯಾದ ವೈದ್ಯ ಎಚ್.ಟಿ ಉಮೇಶ ದೇವೆಂದ್ರಪ್ಪ (34) ಮೂಲತಃ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ನಿಟ್ಟೂರು ನಿವಾಸಿಯಾಗಿದ್ದಾರೆ.
ಸದ್ಯ ತಾಲೂಕಿನ ಡಿ.ಪಿ.ಕಾಲೋನಿಯಲ್ಲಿ ವಾಸವಿದ್ದರು.
ಇವರು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅಕ್ಟೋಬರ 10 ರ ಬೆಳಿಗ್ಗೆ 9.15 ರ ಸುಮಾರಿಗೆ ತನ್ನ ಪತ್ನಿಗೆ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಹೇಳಿ ಕರ್ತವ್ಯದಿಂದ ಮರಳಿ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಸತತ ಮೂರು ದಿನವಾದರು ಬಾರದೇ ಇದ್ದ ಹಿನ್ನೆಲೆ ನಾಪತ್ತೆಯಾದ ವೈದ್ಯರ ಪತ್ನಿ ಡಾ.ಪೂಜಾ ಎಚ್.ಟಿ.ಉಮೇಶ ಅವರು ಘಟನೆ ಕುರಿತು ಗ್ರಾಮೀಣ ನಗರ ಠಾಣೆಯಲ್ಲಿ ದೂರು ನೀಡಿದ್ದು ಪೋಲಿಸರು
ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಮೀಣ ಠಾಣಾ ಪಿಎಸ್ಐ ಮಯೂರ ಪಟ್ಟಣ ಶೆಟ್ಟಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
ಸದ್ಯ ನಾಪತ್ತೆಯಾದ ವೈದ್ಯನ ಪತ್ತೆಗೆ ಗ್ರಾಮೀಣ ಠಾಣಾ ಪೋಲಿಸರಿಂದ ಶೋಧ ಕಾರ್ಯ ಮುಂದುವರೆದಿದೆ.
ನಿಗೂಡವಾಗಿರುವ ವೈದ್ಯನ ನಾಪತ್ತೆ ಪ್ರಕರಣ
ಕಳೆದ ಮೇ ತಿಂಗಳಲ್ಲಿ ಮದುವೆಯಾಗಿರುವ ವೈದ್ಯ ಎಚ್.ಟಿ.ಉಮೇಶ ನೂತನ ಜೀವನ ನಡೆಸಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಬರುವ ರೋಗಿಗಳನ್ನು ಪರೀಕ್ಷಿಸಿ ಉತ್ತಮ ಸೇವೆ ನೀಡುತ್ತಿದ್ದ ವೈದ್ಯರ ನಿಗೂಡ ನಾಪತ್ತೆ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ. ಏಕಾಏಕಿ ನಾಪತ್ತೆಯಾಗಲು ಕಾರಣ ಏನು ಎಂಬುದು ಕುಟುಂಬಸ್ಥರಲ್ಲಿಯೂ ಸಹ ಆತಂಕ ಸ್ರಷ್ಟಿಯಾಗಿದ್ದು ಪೋಲೀಸ ತನಿಖೆಯಿಂದ ತಿಳಿದು ಬರಬೇಕಾಗಿದೆ.