ಅಪರಾಧಿಗಳು ಧರ್ಮವನ್ನು ಹೈಜಾಕ್ ಮಾಡಿಕೊಂಡಿದ್ಧಾರೆ-ಮುಹಮ್ಮದ್ ಕುಂಞ
ಭಟ್ಕಳ: ಗೂಂಡಾಗಳು, ಕ್ರಿಮಿನಲ್ಸ್ ಗಳು, ಕಳ್ಳತನ, ಕೊಲೆ ಸುಲಿಗೆಯಂತಹ ಅಪರಾಧಗಳ ಪ್ರಕರಣ ಎದುರಿಸುತ್ತಿರುವವರು ಧರ್ಮವನ್ನು ಹೈಜಾಕ್ ಮಾಡಿದ ಕಾರಣಕ್ಕೆ ಇಂದು ಧರ್ಮ ಎನ್ನುವುದು ಅಪಾರ್ಥಕ್ಕೊಳಗಾಗಿದೆ ಎಂದು ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು.
ಅವರು ಬುಧವಾರ ಸಂಜೆ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯ ಮೈದಾನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಹಾಗೂ ಜಮಾಅತುಲ್ ಮುಸ್ಲಿಮೀನ್ ತಟ್ಟಿಹಕ್ಕಲ್ ಶಿರಾಲಿಯ ಸಂಯುಕ್ತ ಆಶ್ರಯದಲ್ಲಿ ಜರಗಿದ ‘ಹಲವು ಧರ್ಮಗಳು ಒಂದು ಭಾರತ’ ಎಂಬ ಘೋಷಣೆಯಡಿ ಸೌಹಾರ್ಧ ಸಮಾವೇಶದಲ್ಲಿ ಮಾತನಾಡಿದರು.
ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕ್ರಿಮಿನಲ್ಸ್ ಗಳು ಅಧಿಕಾರ ಪಡೆಯಲು ಅಥವಾ ಯಾರನ್ನಾದರೂ ಅಧಿಕಾರದಿಂದ ಕೆಳಗಿಳಿಸಲು ಧರ್ಮವೊಂದನ್ನು ಮಾಧ್ಯಮವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಧರ್ಮದ ಒರಿಜಿನಲ್(ನೈಜ) ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ ಎಂದ ಅವರು, ವೈವಿಧ್ಯತೆ ಎನ್ನುವುದು ಈ ಜಗತ್ತಿನ ನಿಯಮವಾಗಿದ್ದು ಈ ಮಣ್ಣಿನಲ್ಲಿ ಅದರ ಗುಣ ಅಡಗಿದೆ. ಹಲವು ಧರ್ಮ, ಸಿದ್ಧಾಂತಗಳಿರುವ ಮಣ್ಣಿನಲ್ಲಿ ಬುದಕುತ್ತಿದ್ದು ಧರ್ಮಗಳನ್ನು ಒಳಿತಿನ ಕೆಲಸಕ್ಕೆ ಬಳಸಿಕೊಳ್ಳುವದನ್ನು ಬಿಟ್ಟು ಅದನ್ನು ವಿನಾಶದ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ವಿಷಾಧಿಸಿದರು. ದೇಶ ಪ್ರೇಮವೆಂದರ ಒಂದುಗೂಡುವಿಕೆ, ಬೆರೆಯುವಿಕೆಯಾಗಿದೆ. ಎಲ್ಲ ಧರ್ಮ,ಜಾತಿ, ಭಾಷೆ, ವರ್ಣದ ಜನರು ಒಂದುಗೂಡುವುದು ದೇಶಪ್ರೇಮವೆಂದು ಬಲವಾಗಿ ನಂಬಿದ ನಾವು ಇಂಹತ ಧರ್ಮವನ್ನು ತಿಳಿಸುವ ಮತ್ತು ತಿಳಿಯುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದು ಕರೆ ನೀಡಿದರು. ಜಗತ್ತಿನ ಸೃಷ್ಟಿಗಳೆಲ್ಲವೂ ಪರಸ್ಪರ ಸಹಕಾರ, ಸಹಬಾಳ್ವೆಯಿಂದ ಬದುಕುತ್ತಿವೆ ಆದರ ಮನುಷ್ಯ ಮಾತ್ರ ಧರ್ಮ,ಭಾಷೆ, ಜಾತಿಯ ಆಧಾರದಲ್ಲಿ ಕಚ್ಚಾಡುತ್ತಿದ್ದು ಸಂಘರ್ಷಕ್ಕೆ ಕಾರಣವಾಗಿದ್ದಾನೆ ಎಂದ ಅವರು, ಮನುಷ್ಯ ಮನುಷ್ಯರನ್ನು ಪ್ರೀತಿಸುವ ಕಾರ್ಯವಾಗಬೇಕು, ಧರ್ಮಗ್ರಂಥಗಳು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತಗೊಳ್ಳದೆ ಅದರ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಧರ್ಮನಿಷ್ಠರಿಂದಾಗಿ ಸಮಾಜಕ್ಕೆ ಯಾವುದೇ ಸಮಸ್ಯೆಯಿಲ್ಲ ಅಧರ್ಮಿಯರೇ ಸಮಾಜಕ್ಕೆ ಕಂಠಕರಾಗಿದ್ದಾರೆ ಎಂದರು.
ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಧರ್ಮಸ್ಥಳ ಶ್ರೀ ರಾಮಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮನುಷ್ಯನ ಸಂಶಯ ಗುಣವು ಇಂದು ಪರಸ್ಪರರನ್ನು ದೂರ ಮಾಡುತ್ತಿದೆ. ಎಲ್ಲ ವಿಷಯಕ್ಕೂ ಸಂಶಯದಿಂದ ಕಾಣುವ ಮನುಷ್ಯನ ಕೆಟ್ಟಗುಣಗಳನ್ನು ದೂರೀಕರಿಸಬೇಕಾಗಿದೆ. ಮನುಷ್ಯ ಇಂದು ವೋಟು ಮತ್ತು ನೋಟಿಗಾಗಿ ಸಮಾಜದಲ್ಲಿ ಕೆಡಕನ್ನು ಸೃಷ್ಟಿಸುತ್ತಿದ್ದಾನೆ ಎಂದರು.
ಮುಂಡಳ್ಳಿ ಚರ್ಚ್ ಧರ್ಮಗುರು ಫಾದರ್ ನಿಕೋಲಸ್ ಡಿಸೋಜಾ ಸೌಹಾರ್ಧ ಸಂದೇಶ ನೀಡಿದರು.
ಸೌಹಾರ್ಧ ಸಮಾವೇಶ ಸ್ವಾಗತ ಸಮಿತಿ ಹಾಗೂ ಜನತಾವಿದ್ಯಾಲಯ ಶಿರಾಲಿ ಇದರ ಅಧ್ಯಕ್ಷ ಡಿ.ಜೆ.ಕಾಮತ್, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್.ನಾಯ್ಕ, ಶ್ರೀ.ರಾಮಕ್ಷೇತ್ರದ ಟ್ರಷ್ಟಿ ಜೆ,ಎನ್.ನಾಯ್ಕ (ಬಾಬು ಮಾಸ್ಟರ್) ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ, ಜನಾತ ವಿದ್ಯಾಲಯದ ಪ್ರಾಂಶುಪಾಲ ಅಮೃತ್ ರಾಮರಥ, ರಹಮಾನಿಯ ಮಸೀದಿ ತಟ್ಟಿಹಕ್ಕಲ ಇದರ ಅಧ್ಯಕ್ಷ ಕ್ವಾಜಾ ಶೇಖ್, ಶಿರಾಲಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸಮಾಜ ಸೇವಕ ಡಾ.ಆರ್.ವಿ.ಸರಾಫ್, ಜಮಾತೆ ಇಸ್ಲಾಮಿ ಹಿಂದ್ ಉ.ಕ. ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಭಟ್ಕಳ ಶಾಖಾಧ್ಯಕ್ಷ ಮುಜಾಹಿದ್ ಮುಸ್ತಫಾ ಗ್ರಾ.ಪಂ ಶಿರಾಲಿ ಮಾಜಿ ಸದಸ್ಯ ನಜೀಬುರ್ರಹ್ಮಾನ್ ಶಿರಾಲಿ, ಸುಭಾಷ್ ಕೊಪ್ಪಿಕರ್ ಚಿತ್ರಾಪುರ ಮತ್ತಿರರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
ಮೌಲಾನ ಸೈಯದ್ಯ ಅಬ್ದುಲ್ ಕಾದಿರ್ ಔದಾ ಬರ್ಮಾವರ್ ರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಮಾವೇಶದ ಸಂಚಾಲಕ ಎಂ.ಆರ್. ಮಾನ್ವಿ ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಧರ್ ಶೇಟ್ ಶಿರಾಲಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಮಾನವೀಯತೆಯ ವಕ್ತಾರ ಎಂಬ ವಿಷಯದಲ್ಲಿ ಜರಗಿದ ಉತ್ತರಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧಾ ವಿಜೇತರಾದ ಸುಮನಾ ಆಚಾರ್ಯ ಶಿರಸಿ, ವಿಜಯಲಕ್ಷ್ಮಿ ಭಟ್ಕಳ ಹಾಗೂ ತಾರಾ ವಾಸುನಾಯ್ಕ ಜಾಲಿ ಇವರಿಗೆ ನಗದು ಬಹುಮಾನ ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು.