ಪುತ್ತೂರು: ಪೊಲೀಸ್ ದೌರ್ಜನ್ಯ ಪ್ರಕರಣ; ಪಿಎಸೈ ಸಹಿತ ಇಬ್ಬರ ಅಮಾನತು: ಎಸ್ಪಿ; 'ಪುತ್ತೂರು ಡಿವೈಎಸ್ಪಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲು ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೆಸರಿನಲ್ಲಿ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ನಡೆದಿರುವ ಪೊಲೀಸ್ ದೌರ್ಜನಕ್ಕೆ ಸಂಬಂಧಿಸಿ ಪಿಎಸೈ ಸಹಿತ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪುತ್ತೂರು ಡಿವೈಎಸ್ಪಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಸೆ ಶ್ರೀನಾಥ್ ರೆಡ್ಡಿ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹರ್ಷಿತ್ರರನ್ನು ಅಮಾನತುಗೊಳಿಸಲಾಗಿದೆ. ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮತ್ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಶ್ರದ್ದಾಂಜಲಿ ಬ್ಯಾನರ್ ಹಾಕಿ ಅದಕ್ಕೆ ಚಪ್ಪಲಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರಿಮೊಗರು ನಿವಾಸಿಗಳಾದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳ ಮೇಲೆ ಪೊಲೀಸರು ತೀವ್ರ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ, ಫೋಟೊ ವೈರಲ್ ಆಗಿದ್ದು, ಪೊಲೀಸ್ ದೌರ್ಜನ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಆರೋಪಿಗಳನ್ನು ಜಾಮೀನಿನ ಮೇಲೆ ಠಾಣೆಯಿಂದ ಕರೆದೊಯ್ದಿದ್ದರು.
ದೌರ್ಜನಕ್ಕೆ ಒಳಗಾದವರ ಪೈಕಿ ಅಭಿ ಯಾನೆ ಅವಿನಾಶ್ (26) ಮತ್ತು ಗುರುಪ್ರಸಾದ್ (24) ಎಂಬವರನ್ನು ಬುಧವಾರ ರಾತ್ರಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಅವಿನಾಶ್ ತಂದೆ ವೇಣುನಾಥ ಎಂಬವರು ನೀಡಿರುವ ದೂರಿನಂತೆ ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಟ್ ಶ್ರೀನಾಥ್ ರೆಡ್ಡಿ ಮತ್ತು ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿ ಹರ್ಷಿತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸಿಆರ್ ನಂ 39/23, ಯು/ಎಸ್ 323,324,506, ಆರ್/ಡಬ್ಲ್ಯು 341ಪಿಸಿ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿ ಅವರಿಗೆ ವಹಿಸಿ ಕೊಡಲಾಗಿ ದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಿಚಾರಣೆ ವರದಿ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್ಸೆ ಹಾಗೂ ಹರ್ಷಿತ್ ಪಿಸಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಹಾಗೂ ಪುತ್ತೂರು ಡಿಎಸ್ಪಿ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಆಸ್ಪತ್ರೆಗೆ ಪೂಂಜಾ ಭೇಟಿ: ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಳೆದ ರಾತ್ರಿ ಭೇಟಿಯಾಗಿ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸುತ್ತೇನೆ ಎಂದರು. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಪುತ್ತಿಲ ಬರದಿದ್ದಲ್ಲಿ ಲಾಕಪ್ ಡೆತ್ ಆಗುತ್ತಿತ್ತು; ಅವಿನಾಶ್: ನಮ್ಮನ್ನು ಠಾಣೆಯಲ್ಲಿ ಕೂಡಿ ಹಾಕಿ ಸಿಕ್ಕಾಪಟ್ಟೆ ಹೊಡೆದರು. ಎಲ್ಲಿಯಾದರೂ ಠಾಣೆಗೆ ಅರುಣಣ್ಣ ರಾತ್ರಿ ಬರದೇ ಇರುತ್ತಿದ್ದಲ್ಲಿ ಬೆಳಗ್ಗಿನ ತನಕ ನಮಗೆ ಹೊಡೆದು ಲಾಕಪ್ ಡೆತ್ ಆಗುತ್ತಿತ್ತು ಎಂದು ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅಭಿ ಯಾನೆ ಅವಿನಾಶ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ನಾವು ಗೆಳೆಯರು ಯಾವಾಗಲೂ ಮನೆಯ ಪಕ್ಕದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಿದ್ದು, ಮೇ 15ರಂದು ಅಲ್ಲಿಯೇ ಕುಳಿತುಕೊಂಡಿದ್ದೆವು. ಈ ವೇಳೆ ಆಗಮಿಸಿದ ಪೊಲೀಸರು ನಿಮ್ಮ ಜೊತೆ ಮಾತನಾಡಲು ಇದೆ ಎಂದು ಹೇಳಿ ಠಾಣೆಗೆ ಕರೆದುಕೊಂಡು ಹೋದರು. ಬಳಿಕ ಮಂಜಲ್ಪಡು ಸಮೀಪ ಇರುವ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಪೊಲೀಸರು ಇದರಲ್ಲಿ ಅವಿನಾಶ್ ಯಾರು ಎಂದು ಕೇಳಿದರು. ನಾನೇ ಅವಿನಾಶ್ ಎಂದಾಗ ಬಾರೀ ಹಾರಾಡ್ತೀಯ ಎಂದು ಹೇಳಿ ನನ್ನ ಮೇಲೆ ಹೊಡೆಯಲು ಆರಂಭಿಸಿದರು. ಬಳಿಕ ಡಿವೈಎಸ್ಪಿ ಅವರ ಚೇಂಬರ್ ಕರೆದೊಯ್ದು ಅಲ್ಲಿ ನನ್ನ ಬಟ್ಟೆಗಳನ್ನು ಬಿಚ್ಚಿ ತೊಡೆಗೆ, ಪಾದಕ್ಕೆ ಮತ್ತು ಕೆನ್ನೆಗೆ ಹೊಡೆದರು. ಗನ್ ತೋರಿಸಿ ಹೆದರಿಸಿದರು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.