ಭಟ್ಕಳ: ಪುರಸಭಾ ಕಾರ್ಯಾಲಯ ಭಟ್ಕಳ ಇದರ ವತಿಯಿಂದ ತಾಲೂಕಿನ ಕೋಕ್ತಿನಗರದ ಶ್ರೀ ಮಹಾಸತಿ ದೇವಸ್ಥಾನ ಸಭಾಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜನ ಸಾಮಾನ್ಯರು ಮುಂಜಾನೆ ಎದ್ದೇಳುವ ಮುನ್ನ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೆ ಇಳಿಯುವ ಮೂಲಕ ನಾಡಿನ ಸ್ವಚ್ಛತೆಗೆ ಕಾರಣರಾಗಿದ್ದಾರೆ.
ನಗರ ಚೆಂದವಾಗಿ ಕಾಣಲು ಪೌರಕಾರ್ಮಿಕರು ನಿರಂತರವಾಗಿ ಶ್ರಮಿಸುತ್ತಿದ್ದು,ಸರಕಾರ ಪೌರ ಕಾರ್ಮಿಕರಿಗೆ ತಾಯ್ತನದ ಗೌರವ ನೀಡಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲು ಕ್ರಮ ಕೈಗೊಂಡಿದೆ ಎಂದರು. ಪುರಸಭಾ ಸದಸ್ಯ ಅಬ್ದುಲ್ ಅಜೀಮ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುರಕ್ಷಿತ ಪೌರ ಕಾರ್ಮಿಕ ವೆಂಕಟೇಶ ಕೊರಗಾರ ಮಾತನಾಡಿದರು.ಪುರಸಭಾ ಸದಸ್ಯ ಪ್ರಿಯಾ ಫರ್ನಾಂಡೀಸ್, ಪುರಸಭಾ ಅಭಿಯಂತರ ಅರವಿಂದ, ಪರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಪೌರಕಾರ್ಮಿಕ ಬಾಬು ಕೊರಗಾರ ಮೊದಲಾದವರು ಉಪಸ್ಥಿತರಿದ್ದರು.
ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭಾ ಅಧಿಕಾರಿ ಕಿರಣ ಕಾರ್ಯಕ್ರಮ ನಿರೂಪಿಸಿದರು.
ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರಿಗಾಗಿ ಕ್ರಿಕೆಟ್, ಸಂಗೀತಕುರ್ಚಿ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಕ, ಯುವತಿಯರಿಂದ ಹಿಡಿದು ವಯೋವೃದ್ಧರವರೆಗೆ ಪೌರ ಕಾರ್ಮಿಕರು ಉತ್ಸಾಹದಿಂದಲೇ ಭಾಗವಹಿಸಿರುವುದು ಗಮನ ಸೆಳೆಯಿತು.