ಭಟ್ಕಳ: ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿಗಳಿಂದ ‘ಎನ್ವಿರೋ ವಾಕ್’ ಪರಿಸರ ನಡಿಗೆ
• ವಿದ್ಯಾರ್ಥಿಗಳಿಂದ ಮನೆ ಮನೆಗೆ ತೆರಳಿ ಮರ ವಿತರಣೆ
• ಪರಿಸರ ಪ್ರಜ್ಞೆ ಬೆಳೆಸಿಕೊಳ್ಳವಂತೆ ಕರೆ
ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆಯ ಅಂಗವಾಗಿ ರವಿವಾರ ‘ಎನ್ವಿರೋ ವಾಕ್’ ಪರಿಸರ ನಡಿಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲೆ ಫಹಮಿದಾ ಡಾಟಾ ಜಾಗತಿಕ ಮಟ್ಟದಲ್ಲಿ ಪರಿಸರ ನಾಶವಾಗುತ್ತಿದ್ದು ಇದನ್ನು ತಡೆಯಲು ನಮ್ಮ ನಮ್ಮ ಮನೆಗಳಿಂದಲೇ ಸಾಧ್ಯವಾಗುವುದು. ನಮ್ಮ ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಹಿಷ್ಕರಿಸಿ ಸ್ವಚ್ಚ ಹಾಗೂ ಸುಂದರ ವಾತವರಣ ನಿರ್ಮಾಣ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಬೇಕು ಎಂದರು.
ಶಾಲಾ ಆವರಣದಿಂದ ಆರಂಭಗೊಂಡ ಪರಿಸರ ನಡಿಗೆಯು ಜಾಮಿಯಾಬಾದ್ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವುದರ ಜತೆಗೆ ಮನೆಗೊಂದು ಮರವನ್ನು ವಿತರಿಸಿ ಪರಿಸರ ಪ್ರಜ್ಞೆಯನ್ನು ಮೂಡಿಸಲಾಯಿತು.
ನಂತರ ಶಮ್ಸುದ್ದೀನ್ ವೃತ್ತದಲ್ಲಿ ಪ್ಲೇ ಕಾರ್ಡ್ನ್ನು ಪ್ರದರ್ಶಿಸುವುದರ ಮೂಲಕ ಪರಿಸರ ಜಾಗೃತಿ ಕುರಿತು ಘೋಷಣೆಗಳನ್ನು ಮೊಳಗಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ಪ್ರಸನ್ನ ಭಟ್ ರಿಗೆ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಮರವನ್ನು ವಿತರಿಸಿದರು. ಶಾಲಾ ಮುಖ್ಯಾಧ್ಯಪಕ ಎಂ.ಆರ್. ಮಾನ್ವಿ ಮಾತನಾಡಿ ನಾವು ನಮ್ಮ ಪರಿಸರದಲ್ಲಿ ಮರಗಳನ್ನು ಬೆಳೆಯುವುದರ ಮೂಲಕ ನಮ್ಮ ರಕ್ಷಣೆಯನ್ನು ನಾವೆ ಮಾಡಿಕೊಳ್ಳಬೇಕು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪ್ಲಾಸ್ಟಿಕ ತ್ಯಜಿಸುವುದರ ಮೂಲಕ ಭಟ್ಕಳವನ್ನು ಪ್ಲಾಸ್ಟಿಕ್ ಮುಕ್ತನಗರವನ್ನಾಗಿ ಮಾಡುವ ಪತ್ರಿಜ್ಞೆಯನ್ನು ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೌಲಾನ ಝೀಯಾವುರ್ರಹ್ಮಾನದ್ ನದ್ವಿ, ಪಿಆರ್ಓ ಕಾರ್ಯದರ್ಶಿ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಆಡಳಿತ ಮಂಡಳಿಯ ಹಿರಿಯ ಸದಸ್ಯ ಎಸ್.ಕೆ. ಸೈಯ್ಯದ್ ಸಲಾಹುದ್ದೀನ್, ಅಬ್ದುಲ್ ಮನೀಮ್ ರುಕ್ನುದ್ದೀನ್, ಶಿಕ್ಷಕರಾದ ಮೌಲಾನ ಸುಭಾನ ನದ್ವಿ, ಶಾಝಿರ್ ಹುಸೇನ್, ಮಂಜುನಾಥ್ ಹೆಬ್ಬಾರ್, ಅಬ್ದುಲ್ ರಬಿ ಖಲಿಫಾ, ಎಸ್.ಎಂ.ಸಕ್ಲೈನ್, ಸೈಯದ್ ಶುಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ವನಮಹೋತ್ಸವ ಕಾರ್ಯಕ್ರಮ ಜರಗಿತು.