ಹಿಜಾಬ್ ವಿದ್ಯಾರ್ಥಿನಿಯರ ಕಾಲೇಜು ಸೇರ್ಪಡೆಗೆ ನಿರಾಕರಣೆಗೆ ಖಂಡನೆ
ಮಂಗಳೂರು: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರಾಕರಿಸುವ ಕಾಲೇಜಿನ ಪ್ರಾಂಶುಪಾಲರ ನಡೆಗೆ ಖಂಡನೆ ವ್ಯಕ್ತವಾಗಿದೆ.
ಉಡುಪಿ ಸರಕಾರಿ ಬಾಲಕಿಯರ ಪಪೂ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಹಿಜಾಬ್ ವಿವಾದ ಸೃಷ್ಟಿಸಿ ಸಂವಿಧಾನದ 9 ಮತ್ತು 20ನೇ ವಿಧಿಯನ್ನು ಗಾಳಿಗೆ ತೂರಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿರುತ್ತಾರೆ. ಹಾಗಾಗಿ ತಕ್ಷಣ ಅವರನ್ನು ವಜಾಮಾಡಬೇಕು ಎಂದು ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಲಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಒತ್ತಾಯಿಸಿದ್ದಾರೆ.
ಮುಸ್ಲಿಮ್ ಮಹಿಳೆಯರು ಇಸ್ಲಾಮ್ ಧರ್ಮದ ಪದ್ಧತಿಯಂತೆ ಶಿರವನ್ನು ಹಿಜಾಬ್ ಮೂಲಕ ಮುಚ್ಚಿ, ಸಾರ್ವಜನಿಕವಾಗಿ ಬೆರೆಯುವುದು ಹೊಸತೇನಲ್ಲ. ಈ ಪದ್ಧತಿಯು ಮುಸ್ಲಿಮ್ ಸಮುದಾಯದಲ್ಲಿ ಅನಾದಿ ಕಾಲದಿಂದ ರೂಢಿಯಲ್ಲಿರುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರ, ವಿಚಾರಗಳನ್ನು ಪಾಲಿಸುವುದು ಸಂವಿಧಾನ ಬದ್ಧವಾದ ಹಕ್ಕೂ ಆಗಿದೆ. ಅದಕ್ಕೆ ಯಾರೂ ತಡೆಯೊಡ್ಡುವಂತಿಲ್ಲ. ಆದರೆ ಸಂಘಪರಿವಾರವು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಸಲುವಾಗಿ ಇಂತಹ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಉಡುಪಿ ಸರಕಾರಿ ಕಾಲೇಜಿನ ಪ್ರಾಂಶುಪಾಲರು ಹಿಜಾಬ್ ಧರಿಸಿದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶಿಸದಂತೆ ತಡೆ ಹಿಡಿದಿರುವುದು ಅಕ್ಷಮ್ಯ, ಶಿಕ್ಷಣ ಇಲಾಖೆಯು ತಪ್ಪಿತಸ್ಥರನ್ನು ಅಮಾನತಿನಲ್ಲಿಟ್ಟು ಅವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಮತ್ತು ವಿದ್ಯಾರ್ಥಿಗಳ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಮತ್ತು ದ.ಕ.ಜಿಲ್ಲಾ ಮುಸ್ಲಿಮ್ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಪ್ರತ್ಯೇಕ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.