ಮುರುಢೇಶ್ವರದ ಯುವ ವಿದ್ವಾಂಸ ಮೌಲಾನ ಅದ್ನಾನ್ ಮೈಸೂರು ಬಳಿ ರಸ್ತೆ ಅಪಘಾತದಲ್ಲಿ ಸಾವು
ಭಟ್ಕಳ: ತಾಲೂಕಿನ ಮುರುಢೇಶ್ವರದ ಯುವ ಧರ್ಮಗುರು ಮೌಲಾನಾ ಅದ್ನಾನ್ ಖಾನ್ ನದ್ವಿ(23) ಜನವರಿ 27 ರಂದು ಮೈಸೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ ಮೌಲಾನಾ ಅದ್ನಾನ್ ಮುರುಢೇಶ್ವರದ ಮದ್ರಾಸಾ ತನ್ವೀರ್-ಉಲ್-ಇಸ್ಲಾಂನಲ್ಲಿ ಜ.೨೬ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ೨ ಗಂಟೆ ಸುಮಾರು ತಮ್ಮ ದ್ವಿಚಕ್ರವಾಹನದ ಮೂಲಕ ತನ್ನ ಸ್ನೇಹಿತನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಿದ್ದರು ಎನ್ನಲಾಗಿದ್ದು ಮೈಸೂರು ಸಮೀಪ ನಾಗಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಮೌಲಾನಾ ಅದ್ನಾನ್ ಮುರುಡೇಶ್ವರದ ಮುಹಿದ್ದೀನ್ ಮಸೀದಿಯಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮದ್ರಸಾ ತನ್ವೀರ್-ಉಲ್-ಇಸ್ಲಾಂನಲ್ಲಿ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಇವರ ಅಕಸ್ಮಿಕ ಸಾವಿನಿಂದ ಮುರುಢೇಶ್ವರದ ಜನರು ತೀವ್ರ ದುಃಖಿತರಾಗಿದ್ದು ಇಡೀ ಊರೇ ಸೂತಕದ ಛಾಯೆಯಲ್ಲಿ ಮುಳುಗಿದಂತಾಗಿದೆ. ಸದಾ ಹಸ್ನಮುಖಿಯಾಗಿದ್ದ ಮೌಲಾನ ಅದ್ನಾನ್ ಎಲ್ಲರೊಂದಿಗೆ ಬೆರೆಯುತ್ತಿದ್ದರು ಎಂದು ಇವರ ಗೆಳೆಯರ ಬಳಗ ಮಾಹಿತಿ ನೀಡಿದ್ದಾರೆ. ಅಲ್ಲಾಹನು ಇವರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬದವರಿಗೆ ದುಖಃವನ್ನು ಸಹಿಸುವ ಶಕ್ತಿ ನೀಡಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.
ಅಪಘಾತ ವರದಿಯಾದ ತಕ್ಷಣ, ಅವರ ಸಂಬಂಧಿಕರು ಮತ್ತು ಮುರುಢೇಶ್ವರ ಮತ್ತು ಮೈಸೂರಿನ ಸ್ನೇಹಿತರು ಸ್ಥಳಕ್ಕೆ ಧಾವಿಸಿದರು. ಶವವನ್ನು ಪೋಸ್ಟ್ಮಾರ್ಟಂಗಾಗಿ ನಾಗ ಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪೋಸ್ಟರ್ಮಾಟಮ್ ವರದಿ ನಂತರ ಮೃತದೇಹವನ್ನು ಬುಧವಾರ ರಾತ್ರಿ ಮುರುಢೇಶ್ವರಕ್ಕೆ ತಂದು ರಾತ್ರಿಯೇ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.