ಮುರುಡೇಶ್ವರದಲ್ಲಿ ವ್ಯಕ್ತಿ ನೇಣಿಗೆ ಶರಣು
ಭಟ್ಕಳ: ತಾಲೂಕಿನ ಪ್ರವಾಸಿ ತಾಣ ಮುರುಡೇಶ್ವರದ ವಸತಿಗೃಹವೊಂದರಲ್ಲಿ ಪ್ರವಾಸಿ ವ್ಯಕ್ತಿಯೋರ್ವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರಿನ ಹೊಸಕೋಟೆ ನಿವಾಸಿ ಕೃಷ್ಣಮೂರ್ತಿ ಎಸ್. (38) ಎಂದು ಗುರುತಿಸಲಾಗಿದೆ. ಇವರು ಕಳೆದ ಆ.16ರಂದು ಬೆಳಿಗ್ಗೆ 4.30 ಗಂಟೆಗೆ ಮುರುಡೇಶ್ವರದ ಪ್ರಫುಲ್ಲಾ ವಸತಿಗೃಹದಲ್ಲಿ ಕೋನೆಯನ್ನು ಪಡೆದು ತಂಗಿದ್ದರು. ಆ.17ರಂದು ದಿನವಿಡೀ ಕೋಣೆಯಿಂದ ಹೊರ ಬಾರದ ಕಾರಣ ಅನುಮಾನಗೊಂಡ ವಸತಿಗೃಹದ ಸಿಬ್ಬಂದಿಗಳು ರವಿವಾರ ಬೆಳಿಗ್ಗೆ ಬಾಗಿಲನ್ನು ಒಡೆದು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕೃಷ್ಣಮೂರ್ತಿ ತಂದೆ, ತಾಯಿ, ಅಣ್ಣನಿಂದ ದೂರವಾಗಿ ಹೆಂಡತಿಯೊಂದಿಗೆ ಪ್ರತ್ಯೇಕ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಇತ್ತೀಚಿಗೆ ಹೆಂಡತಿ ಹೆರಿಗೆಗೆಂದು ತವರು ಮನೆ ಸೇರಿಕೊಂಡ ಕಾರಣ ಮನೆಯಲ್ಲಿ ಏಕಾಂಗಿಯಾಗಿದ್ದರು. ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ಹೇಳಿದ್ದ ಇವರು ಮುರುಡೇಶ್ವರಕ್ಕೆ ಬಂದಿದ್ದು, ಸಾವಿಗೆ ಶರಣಾಗಿದ್ದಾರೆ. ಕೃಷ್ಣಮೂರ್ತಿ ಕುಟುಂಬದವರು ಮುರುಡೇಶ್ವರಕ್ಕೆ ಬರುವುದಾಗಿ ಹೇಳಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಐ ಮೋಹಿನಿ ಶೆಟ್ಟಿ ನೇತೃತ್ವದಲ್ಲಿ ತನಿಖೆ ಮುಂದುವೆರದಿದೆ.