ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ:ಮಹಿಳೆ ಸಾವು, ನಾಲ್ವರು ಗಂಭೀರ
ಭಟ್ಕಳ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ ೬೬ರ ರಂಗಿನಕಟ್ಟೆ ಕೋರ್ಟ್ ಭಾನುವಾರ ಬೆಳಗ್ಗೆ 6.30ರ ಸುಮಾರಿಗೆ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಶಿರಾಲಿ ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಎರಡು ಆಟೋರಿಕ್ಷಾಗಳು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಭಾನುವಾರ ಮುಂಜಾನೆ ಮುಠ್ಠಳ್ಳಿ ಮೂಲದ ಆಟೋ ಚಾಲಕ ರೈಲ್ವೆ ನಿಲ್ದಾಣದಿಂದ ಶಿರಾಲಿ ಅಳ್ವೇಕೋಡಿಗೆ ಪ್ರಯಾಣಿಕರನ್ನು ಬಿಟ್ಟು ಭಟ್ಕಳಕ್ಕೆ ಬರುವಾಗಿ ಶಿರಾಲಿಯಲ್ಲಿ ಓರ್ವ ಮಹಿಳೆಯನ್ನು ಹತ್ತಿಸಿಕೊಂಡಿದ್ದಾನೆ. ಇನ್ನು ಹೆಬಳೆ ತೆಂಗಿನ ಗುಂಡಿ ಮೂಲದ ಆಟೋ ಚಾಲಕ ಭಟ್ಕಳದ ಕಡೆಗೆ ಬರುವಾಗ ಓವರ ಟೇಕ್ ಮಾಡುವ ವೇಳೆ ಆಯತಪ್ಪಿ ಢಿಕ್ಕಿ ಸಂಭವಿಸಿದೆ. ಈ ವೇಳೆ ಕೆ.ಎ. 53 ಸಿ. 1992 ನೋಂದಣಿಯ ಬೆಂಗಳುರಿನಿಂದ ಮುರ್ಡೇಶ್ವರದ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರ ಕಾರು ನಿಯಂತ್ರಣ ತಪ್ಪಿ ಎರಡು ಆಟೋಗೆ ಗುದ್ದಿ ಅಪಘಾತ ಉಂಟಾಗಿದೆ. ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ರತ್ನಮ್ಮ ಕಾರಿನ ಗ್ಲಾಸ ಒಡೆದು ರಸ್ತೆ ಮೇಲೆ ಬಿದ್ದಿದ್ದಾರೆ. ಎರಡು ಆಟೋ ರಿಕ್ಷಾ ಪಲ್ಟಿಯಾಗಿದ್ದು ಕಾರಿನ ಮುಂಭಾಗದ ಜಖಂಗೊಂಡಿದೆ. ತಕ್ಷಣ ಅಲ್ಲಿನ ಸ್ಥಳಿಯರು ಆಟೋ ಚಾಲಕರು ಗಾಯಾಳುಗಳನ್ನು ತಾಲೂಕಾಸ್ಪತ್ರೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಶಿರಾಲಿಯ ಮಾದೇವಿ ಸುರೇಶ್ ನಾಯ್ಕ(೪೨) ಎಂಬುವವರ ತೆಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಹಾಗೂ ಆಟೋ ಚಾಲಕ ನಾಗೇಶ ಸಣ್ತಮ್ಮ ನಾಯ್ಕ (50) ತೆಂಗಿನಗುಂಡಿ ನಿವಾಸಿಯಾಗಿದ್ದು ತಲೆ ಹಾಗೂ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇನ್ನುಳಿದಂತೆ ಇನ್ನೊಂದು ರಿಕ್ಷಾ ಚಾಲಕ ಚಂದ್ರ ಗೋಯ್ದ ನಾಯ್ಕ ( 33) ಮುಠ್ಠಳ್ಳಿ ತಲೆಗೆ ಹಾಗೂ ಕೈಗೆ ಪೆಟ್ಟಾಗದ್ದು, ಭಾಸ್ಕರ ನಾಗಪ್ಪ ನಾಯ್ಕ (49) ರಿಕ್ಷಾ ಪ್ರಯಾಣಿಕ ಶಿರಾಲಿ ಮಾವಿನಕಟ್ಟೆ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳುರಿನ ವೈಟ್ ಫೀಲ್ಡ್ ನಿವಾಸಿ ರತ್ನಮ್ಮ ಮುನೇಟಪ್ಪ (22) ಈಕೆಗೆ ತಲೆಗೆ ಹಾಗೂ ಕೈಗೆ ಗಾಯವಾಗಿದ್ದು, ಇನ್ನೋರ್ವ ಬೆಂಗಳೂರು ವೈಟ್ ಫೀಲ್ಡ್ ನಿವಾಸಿ ಕಾವ್ಯಾ ವೆಂಕಟೇಶ (20) ಈಕೆಗೆ ಕೈಗೆ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಕುಂದಾಪುರ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಪಘಾತದಲ್ಲಿ ಆಟೋದಲ್ಲಿನ ಅನಿಲ ಗ್ಯಾಸ ಸೋರಿಕೆ ಹಿನ್ನೆಲೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಧಾವಿಸಿದ್ದು ಗ್ಯಾಸ್ ಸೋರಿಕೆಯನ್ನು ತಕ್ಷಣವೇ ನಿಲ್ಲಿಸಿದ್ದಾರೆ.
ಈ ಬಗ್ಗೆ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.