ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿ ನಗರದ ಪ್ರತಿಷ್ಠಿತ ಎರಡು ವೈದ್ಯಕೀಯ ಕಾಲೇಜುಗಳ ಇಬ್ಬರು 7 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ನಾಲ್ವರು ಯುವತಿಯರೂ ಸೇರಿದ್ದಾರೆ.
ಈ ಬಗ್ಗೆ ತನ್ನ ಕಚೇರಿಯಲ್ಲಿಂದು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಪ್ರಮುಖ ಆರೋಪಿ ಯು.ಕೆ. ಮೂಲದ ಸಾಗರೋತ್ತರ ಭಾರತೀಯ ಪ್ರಜೆ ಗಾಂಜಾ ಪೆಡ್ಲರ್ ನೀಲ್ ಕಿಶೋರಿ ಲಾಲ್ ರಾಮ್ ಜೀ ಶಾ(38), ವೈದ್ಯರಾದ ಕೇರಳದ ಡಾ.ಸಮೀ (32) ಮತ್ತು ತಮಿಳುನಾಡಿನ ಡಾ.ಮಣಿಮಾರನ್ ಮುತ್ತು(28), ವೈದ್ಯಕೀಯ ವಿದ್ಯಾರ್ಥಿನಿಯರಾದ ಕೇರಳದ ಡಾ.ನಾದಿಯಾ ಸಿರಾಜ್ (24), ಆಂಧ್ರ ಪ್ರದೇಶದ ಡಾ.ವರ್ಷಿಣಿ ಪ್ರಾಥಿ(26), ಮಹಾರಾಷ್ಟ್ರ ಪುಣೆಯ ಡಾ.ಇರಾ ಬಾಸಿನ್ (23), ಪಂಜಾಬ್ ಚಂಡಿಗಡದ ಡಾ.ರಿಯಾ ಚಡ್ಡಾ(22), ವೈದ್ಯ ವಿದ್ಯಾರ್ಥಿಗಳಾದ ಚಂಡಿಗಡದ ಡಾ.ಭಾನು ಧಹಿಯಾ(27), ದಿಲ್ಲಿಯ ಡಾ.ಕ್ಷಿತಿಜ್ ಗುಪ್ತಾ(25) ಮತ್ತು ಬಂಟ್ವಾಳ ತಾಲೂಕಿನ ಮಾರಿಪಳ್ಳದ ಮುಹಮ್ಮದ್ ರವೂಫ್ ಅಲಿಯಾಸ್ ಗೌಸ್ (34) ಬಂಧಿತ ಆರೋಪಿಗಳೆಂದು ತಿಳಿಸಿದ್ದಾರೆ.
ಬಂಧಿತರ ಪೈಕಿ ಡಾ.ಸಮೀರ್ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಮೆಡಿಕಲ್ ಆಫೀಸರ್ ಆಗಿದ್ದರೆ, ಡಾ.ಮಣಿಮಾರನ್ ಮುತ್ತು ಮಣಿಪಾಲದ ಮೆಡಿಕಲ್ ಕಾಲೇಜು ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಸರ್ಜನ್ ಆಗಿದ್ದ ಎಂದು ಕಮಿಶನರ್ ಮಾಹಿತಿ ನೀಡಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ ರಸ್ತೆ ಬಳಿಯ ಫ್ಲ್ಯಾಟ್ವೊಂದರಲ್ಲಿ ಗಾಂಜಾ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ. ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಿಡಿಎಸ್ ವಿದ್ಯಾರ್ಥಿಯಾಗಿರುವ ನೀಲ್ ಕಿಶೋರಿ ಲಾಲ್ ರಾಮ್ ಜೀ ಶಾನನ್ನು ಜ.7ರಂದು ವಶಕ್ಕೆ ಪಡೆಯಲಾಗಿತ್ತು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ನಗರದಲ್ಲಿ ಈತ ಹಲವು ವರ್ಷಗಳಿಂದ ನಡೆಸುತ್ತಿದ್ದ ಗಾಂಜಾ ಮಾರಾಟ ಪ್ರಕರಣ ಬೆಳಕಿಗೆ ಬಂತು ಎಂದರು.
ಈತನಿಂದ 50 ಸಾವಿರ ರೂ. ಮೌಲ್ಯದ 2 ಕೆ.ಜಿ. ಗಾಂಜಾ, 2 ಮೊಬೈಲ್ ಫೋನ್, 7 ಸಾವಿರ ರೂ. ನಗದು, ಡಿಜಿಟಲ್ ತೂಕ ಮಾಪನ, ಆಟಿಕೆ ಪಿಸ್ತೂಲ್ನ್ನು ಮರಪಡಿಸಿಕೊಳ್ಳಲಾಗಿತ್ತು. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ವೈದ್ಯರ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಮಾಹಿತಿ ನೀಡಿದ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಕಿಶೋರಿ ಲಾಲ್ ನೀಡಿರುವ ಸುಳಿವಿನ ಆಧಾರದಲ್ಲಿ ನಗರದ ವಿವಿಧ ಹಾಸ್ಟೆಲ್, ಪಿಜಿ, ಖಾಸಗಿ ನಿವಾಸಗಳಿಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಇವರಿಂದಲೂ ಗಾಂಜಾ ಮತ್ತು 9 ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ
ಇವರೆಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ವಿವರಿಸಿದರು. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಈತನ ಗಾಂಜಾ ವಹಿವಾಟಿನಲ್ಲಿ ಯಾವ ರೀತಿ ಭಾಗಿಯಾಗಿದ್ದರು ಎನ್ನುವುದು ತನಿಖೆಯಿಂದ ತಿಳಿದುಬರಲಿದೆ ಎಂದವರು ತಿಳಿಸಿದರು.
ಗಾಂಜಾ ಜೊತೆಗೆ ಎಂಡಿಎಂಎ ಸೇವನೆ:
ಬಂಧಿತ ಆರೋಪಿಗಳ ಪೈಕಿ ಕೆಲವು ಮಂದಿ ಆರೋಪಿಗಳು ಪೆಡ್ಲರ್ ನೀಲ್ ಕಿಶೋರಿ ಲಾಲ್ನ ನಿಕಟ ಸಂಪರ್ಕ ಹೊಂದಿದ್ದು, ಪಾರ್ಟಿ ಮಾಡುವಾಗ ಡ್ರಗ್ಸ್ ಸೇವಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಅವರು ಗಾಂಜಾ ಜೊತೆಗೆ ಎಂಡಿಎಂಎ ಮತ್ತು ಇತರ ಸಿಂಥೆಟಿಕ್ ಡ್ರಗ್ಸ್ ಸೇವಿಸುವ ಚಟ ಹೊಂದಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ ಎ೦ದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
15 ವರ್ಷಗಳಿಂದ ಮಂಗಳೂರಿನಲ್ಲಿರುವ ನೀಲ್ ಕಿಶೋರಿಲಾಲ್:
ಕಿಶೋರಿಲಾಲ್ ಯು.ಕೆ ಪ್ರಜೆಯಾಗಿದ್ದು, ಎನ್ಆರ್ಐ ಕೋಟಾದಲ್ಲಿ ಡೆಂಟಲ್ ಕಾಲೇಜಿ ನಲ್ಲಿ ಸೀಟ್ ಪಡೆದಿದ್ದನು. ಕಳೆದ 15 ವರ್ಷಗಳಿಂದಲೂ ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೂ, ಈತನಿಗೆ ಶಿಕ್ಷಣ ಪೂರ್ಣಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಗಾಂಜಾ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಆಯುಕ್ತರು ಹೇಳಿದರು. ಕುಕ್ಕರ್ ಬಾಂಬ್ ಬ್ಲಾಸ್ಟ್ ಘಟನೆಯ ನಂತರ ಪಿಜಿ ನಿಯಮಗಳನ್ನು ಕಠಿಣಗೊಳಿಸಲಾಗಿತ್ತು. ಜನರಿಗೆ ಯಾವುದೇ ಅನುಮಾನಗಳಿದ್ದಲ್ಲಿ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿತ್ತು. ಇದರ ಫಲವಾಗಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಕಮಿಶನರ್ ತಿಳಿಸಿದ್ದಾರೆ.