ಮಂಗಳೂರು: ಮಂಗಳೂರು-ಮಡಗಾಂವ್ (ಗೋವಾ) ನಡುವೆ ಸಂಚರಿ ಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ 3 ದಿನಗಳ ಪ್ರಾಯೋಗಿಕ ಸಂಚಾರಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಲಾಗಿದೆ. ಡಿ.30ರಂದು ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ.
ರೈಲಿನ ಪ್ರಾಯೋಗಿಕ ಸಂಚಾರದ ಪರಿಶೀ ಲನೆಯ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಕಾರ್ಪೊರೇಟರ್ ಭರತ್ ಕುಮಾರ್ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಓಡಾಟ ನಡೆಸಲಿದೆ. ಕೇವಲ 4:35 ಗಂಟೆಗಳಲ್ಲಿ 315 ಕಿ.ಮೀ. ದೂರವನ್ನು ಗಂಟೆಗೆ 68.7 ಕಿ.ಮೀ. ವೇಗದಲ್ಲಿ ಕ್ರಮಿಸಲಿದೆ. ಪ್ರತಿದಿನ ಬೆಳಗ್ಗೆ 8:30ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಮಧ್ಯಾಹ್ನ 1:05ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್ ನಿಂದ ಸಂಜೆ 6:10ಕ್ಕೆ ಹೊರಟು ರಾತ್ರಿ 10:45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲಿಗೆ ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ.
3.50 ಗಂಟೆಯಲ್ಲಿ ಗುರಿ ತಲುಪಿದ ರೈಲು: ವಂದೇ ಭಾರತ್ ಮಂಗಳೂರಿನಿಂದ ಗೋವಾ ಮಡಗಾಂವ್ ರೈಲ್ವೆ ನಿಲ್ದಾಣ ವನ್ನು ಕೇವಲ 3 ಗಂಟೆ 50 ನಿಮಿಷದಲ್ಲಿ ತಲುಪಿದೆ. ಅಧಿಕೃತ ಸಂಚಾರ ಆರಂಭಿಸಿದ ಮೇಲೆಯೂ ಇದೇ ವೇಗವನ್ನು ಉಳಿಸಿಕೊಂಡರೆ ಉತ್ತಮ ಜನಸ್ಪಂದನ ಸಿಗಬಹುದು ಎಂಬ ಅನಿಸಿಕೆ ರೈಲ್ವೆ ಬಳಕೆದಾರರಿಂದ ವ್ಯಕ್ತವಾಗಿದೆ.