ಕಾರವಾರ, ಮಾರ್ಚ 28 : ಕಾರವಾರ ನಗರಸಭೆಯಲ್ಲಿ ಈಗಾಗಲೇ ಠರಾವು ಮಾಡಿರುವ ಪ್ರಕಾರ ಮೀನು ಮಾರುಕಟ್ಟೆಯನ್ನು ಒಳಗೊಂಡ ವಾಣ ಜ್ಯ ಸಂಕೀರ್ಣ ನಿರ್ಮಿಸಲು ಅಗತ್ಯವಾದ ನಿವೇಶನವನ್ನು ಖುಲ್ಲಾ ಮಾಡಿಕೊಟ್ಟರೆ, ತಕ್ಷಣ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸ್ಪಷ್ಟಪಡಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಕುರಿತು ಕರೆಯಲಾಗಿದ್ದ ನಗರಸಭೆ ಅಧ್ಯಕ್ಷ ಹಾಗೂ ಸದಸ್ಯರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕಳೆದ 9ತಿಂಗಳಿನಿಂದ ಕಾರವಾರ ಮೀನು ಮಾರುಕಟ್ಟೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ಐಡಿಎಸ್ಎಂಟಿ ಯೋಜನೆಯಡಿ ಮೂರುವರೆ ಕೋಟಿ ರೂ. ಹಾಗೂ ನಗರೋತ್ಥಾನ ಯೋಜನೆಯಡಿ ನಾಲ್ಕುವರೆ ಕೋಟಿ ರೂ. ಒಟ್ಟು 8ಕೋಟಿ ರೂ. ಲಭ್ಯವಿದೆ. ಸುಸಜ್ಜಿತವಾದ ಮೀನು ಮಾರುಕಟ್ಟೆ ಒಳಗೊಂಡ ವಾಣ ಜ್ಯ ಸಂಕೀರ್ಣವನ್ನು ನಿರ್ಮಿಸಲು ನಗರಸಭೆ ಠರಾವು ಅಂಗೀಕರಿಸಿದ್ದರೂ, ಇದುವರೆಗೆ ಅಗತ್ಯ ನಿವೇಶನವನ್ನು ಒದಗಿಸದ ಕಾರಣ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಶನಿವಾರದಿಂದ ತೆರವು ಪ್ರಕ್ರಿಯೆ ಪ್ರಾರಂಭಿಸಿ: ಪ್ರಥಮ ಹಂತದಲ್ಲಿ ಮೀನು ಮಾರುಕಟ್ಟೆ ಹಾಗೂ ವಾಣ ಜ್ಯ ಮಳಿಗೆಗಳನ್ನು ನಿರ್ಮಿಸಲು ಅಗತ್ಯವಾದ ನಿವೇಶನವನ್ನು ಒದಗಿಸಬೇಕು. ಇದಕ್ಕಾಗಿ ಇನ್ನೂ ಅಲ್ಲಿ ವಹಿವಾಟು ನಡೆಸುತ್ತಿರುವ ಮಟನ್ ಮತ್ತು ಚಿಕನ್ ಮಳಿಗೆಗಳು, ಮುಂಭಾಗದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಈಗಾಗಲೇ 103ಮಳಿಗೆಗಳ ಲೀಸ್ ಅವಧಿ ಮುಕ್ತಾಯವಾಗಿದ್ದು, ಅವುಗಳನ್ನು ತೆರವು ಪ್ರಕ್ರಿಯೆಯನ್ನು ಇದೇ ಶನಿವಾರದಿಂದ ಆರಂಭಿಸಿ ಎಪ್ರಿಲ್ 8ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಜತ್ತನ್ನ, ಕೆಲವು ಮಳಿಗೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು. ಲೀಸ್ ಅವಧಿ ಮುಗಿದಿರುವುದರಿಂದ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಸುಲಭವಾಗಿ ತೆರವು ಮಾಡಬಹುದಾಗಿದೆ. ಆದರೂ ತಡೆಯಾಜ್ಞೆ ತಂದಿರುವ 15ಮಳಿಗೆಗಳ್ನು ಹೊರತುಪಡಿಸಿ ಉಳಿದ ಮಳಿಗೆಗಳ ತೆರವು ಕಾರ್ಯಾಚರಣೆ ಆರಂಭಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಇದಕ್ಕೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯರಾದ ಗಣಪತಿ ಉಳ್ವೇಕರ್, ದೇವಿದಾಸ ನಾಯ್ಕ ಮತ್ತಿತರರು ಸಹಮತ ವ್ಯಕ್ತಪಡಿಸಿ, ತೆರವು ಪ್ರಕ್ರಿಯೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಟನ್ ಮತ್ತು ಚಿಕನ್ ಅಂಗಡಿಗಳನ್ನು ಖಾಲಿ ಮಾಡಿಸುವ ಮೂಲಕ ತೆರವು ಪ್ರಕ್ರಿಯೆಗೆ ಚಾಲನೆ ನೀಡಬಹುದಾಗಿದೆ. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ವಾಣ ಜ್ಯ ಸಂಕೀರ್ಣದಲ್ಲಿ ಈಗಿರುವ ಬಾಡಿಗೆದಾರರಿಗೆ ಆದ್ಯತೆ ನೀಡುವ ಕುರಿತು ಚಿಂತನೆ ನಡೆಸುವಂತೆ ನಗರಸಭೆ ಸದಸ್ಯ ನಿತಿನ್ ಪಿಕಳೆ ಅವರು ಹೇಳಿದರು. ಲೀಸ್ ಅವಧಿ ಈಗಾಗಲೇ ಮುಗಿದಿರುವುದರಿಂದ ಈಗಿರುವ ಮಳಿಗೆದಾರರಿಗೆ ಆದ್ಯತೆ ನೀಡಲು ಕಾನೂನು ಪ್ರಕಾರ ಸಾಧ್ಯವಿಲ್ಲ. ಅವರು ಸಹ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದರು.
ನಿವೇಶನ ಖುಲ್ಲಾ ಪಡಿಸಿ ನೀಡಿದರೆ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಿ ಜುಲೈ ಅಂತ್ಯದ ಒಳಗಾಗಿ ಕಾರ್ಯಾದೇಶ ನೀಡಿ ಆಗಸ್ಟ್ 15ರಿಂದ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಮೀನು ಮಾರುಕಟ್ಟೆ ಹೆದ್ದಾರಿ ಅಗಲೀಕರಣದಿಂದ ತೊಂದರೆಗೆ ಒಳಗಾಗಲಿದ್ದು, ಮೀನು ಮಾರಾಟಗಾರರಿಗೆ ಆದಷ್ಟು ಬೇಗನೆ ಮಾರುಕಟ್ಟೆ ನಿರ್ಮಿಸಿ ಕೊಡುವ ಅನಿವಾರ್ಯತೆಯಿದೆ. ಮೀನು ಮಾರುಕಟ್ಟೆ ನಿರ್ಮಾಣದೊಂದಿಗೆ ನಗರಸಭೆಗೆ ಆದಾಯವೂ ಬರಬೇಕು ಎಂಬ ಉದ್ದೇಶದಿಂದ ವಾಣ ಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದು, ಇದೇ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನಗರಸಭೆ ಸದಸ್ಯರಾದ ವಿಠ್ಠಲ ಸಾವಂತ್, ರಂಜು ಮಾಸೆಲ್ಕರ್, ಪಾಂಡುರಂಗ ರೇವಂಡಿಕರ್, ರತ್ನಾಕರ ನಾಯ್ಕ, ದೇವಿದಾಸ ನಾಯ್ಕ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.