ಕಾರವಾರ ಏ. 25 : ಜಿಲ್ಲೆಯಲ್ಲಿ ಏ.30 ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಗ್ರಾಮೀಣ ಪ್ರದೇಶದಲ್ಲಿ 85197 ಮತ್ತು ಪಟ್ಟಣ ಪ್ರದೇಶದಲ್ಲಿ 28629 ಒಟ್ಟು 113826 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ. 100 ಕ್ಕಿಂತಲೂ ಹೆಚ್ಚು ಗುರಿಯನ್ನು ಸಾಧಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯ ಸ್ಲಾಘನೀಯ. ಎರಡನೇ ಸುತ್ತಿನಲ್ಲೂ ಯಾವುದೇ ಮಗು ಕೂಡಾ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸಿ ಹಾಗೂ ಮರು ದಿನವೂ ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಮಗುವಿಗೆ ಲಸಿಕೆ ನೀಡಿ ಎಂದು ಸೂಚಿಸಿದರು.
ಏ.30 ರಂದು ಬೆಳಗ್ಗೆ 8 ಗಂಟೆಗೆ ಕಾರವಾರ ಕಿಮ್ಸ್ ಆಸ್ಪತ್ರೆಯಲ್ಲಿ 2ನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದು ಡಿ.ಹೆಚ್.ಒ. ಡಾ.ಅಶೋಕಕುಮಾರ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘ ಸಂಸ್ಥೆ ಪದಾಧಿಕಾರಿಗಳು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು
ಕಾರವಾರ:ಕಬೀರ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಕಾರವಾರ ಏ.25 : ರಾಷ್ಟ್ರೀಯ ಕಬೀರ್ ಪುರಸ್ಕಾರವನ್ನು ಕೋಮು ಸೌಹಾರ್ದತೆ ಹಾಗೂ ರಾಷ್ಟ್ರೀಯ ಐಕತೆಗಾಗಿ ಗ್ರೇಡ್-1, ರೂ.2 ಲಕ್ಷ, ಗ್ರೇಡ್-2 ರೂ.1 ಲಕ್ಷ, ಗ್ರೇಡ್-3 ರೂ.50 ಸಾವಿರ ಗೌರವ ಧನ ನೀಡಲಾಗುತ್ತದೆ. ಕಾರಣ ಉ.ಕ. ಜಿಲ್ಲೆಯಲ್ಲಿ ಕಬೀರ ಪುರಸ್ಕಾರ ನೀಡುವ ಬಗ್ಗೆ ಅರ್ಹ ವ್ಯಕ್ತಿಗಳಿಂದ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸು ಪತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಆಂಗ್ಲ ಭಾಷೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕೋರಿದ್ದಾರೆ.