ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ಅಕ್ಕಿ ಕೊಡಲು ನಿರಾಕರಣೆ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಅನ್ನ ತಯಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೆ, ಆಯಾ ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಅನ್ನಭಾಗ್ಯ ಯೋಜನೆಗೆ ಅಗತ್ಯ ಅಕ್ಕಿಯನ್ನು ಕೇಂದ್ರದಿಂದ 34 ರೂ.ಗೆ ಖರೀದಿ ಮಾಡಲು ರಾಜ್ಯ ಸರಕಾರ ನಿರ್ಧಾರ ಮಾಡಿತ್ತು. ಆರಂಭದಲ್ಲಿ ಇದಕ್ಕೆ ಎಫ್ಸಿಐ ಒಪ್ಪಿಗೆ ಸೂಚಿಸಿತ್ತು. ಆದರೆ ಮುಂಗಾರು ವಿಳಂಬದ ಕಾರಣ ನೀಡಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಮಾಡದಿರಲು ನಿರ್ಧಾರ ಮಾಡಿದೆ. ಆದರೆ ಇದು ಕೇಂದ್ರದ ರಾಜಕೀಯ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸರಕಾರ ನಮಗೆ ಅಕ್ಕಿ ನೀಡುವುದಾಗಿ ತಿಳಿಸಿತ್ತು. ಆದರೆ, ಇದು ಪುಕ್ಕಟ್ಟೆ ಅಲ್ಲ, ಕಾಸು ಕಟ್ಟಿಸಿಕೊಂಡು ನೀಡುವುದು. ಆದರೆ, ಏಕಾಏಕಿ ಎಫ್ಸಿಐನಿಂದ ಅಕ್ಕಿ ನೀಡುವ ಪ್ರಕ್ರಿಯೆ ರದ್ದು ಮಾಡಿದೆ. ಇದರಿಂದ ಕೇಂದ್ರ ಸರಕಾರ, ಬಿಜೆಪಿಗೆ ಒಳ್ಳೆಯದು ಆಗಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಮೊದಲು 15 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕಿ. ಕೇಂದ್ರ ಸರಕಾರವನ್ನು ಸಂಪರ್ಕಿಸಿ ಅಕ್ಕಿ ಕೊಡಿಸಿ. ಅದು ಬಿಟ್ಟು ರಾಜಕೀಯ ಮಾಡುವುದು ಬೇಡ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದರು. ಆದರೆ, ನಾವೇ ಅವರಿಗೆ ಬೇಡವೆಂದು ಸಲಹೆ ನೀಡಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಾಂಗ್ರೆಸ್ 10 ಕೆಜಿ ನೀಡುವುದಾಗಿ ಸ್ಪಷ್ಟವಾಗಿ ಹೇಳಿದ್ದು, ಅದನ್ನು ನಾವು ನೀಡುತ್ತೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ನಾಲ್ಕು ಕೆಜಿಗೆ ಇಳಿಸಿದ್ದರು. ಅವರಿಗೆ ಬಿಪಿಎಲ್ ಕಾರ್ಡ್ದಾರರ ಮೇಲೆ ಅನುಕಂಪ ಇರಲಿಲ್ಲ. ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಸರಕಾರದ ಬಳಿ ಕೇಳಿ ಘೋಷಣೆ ಮಾಡಬೇಕಿತ್ತೇ? ಎಂದು ಟೀಕಿಸಿದರು.
ಕೇಂದ್ರ ಸರಕಾರ ಬಿಜೆಪಿದ್ದಾ? ಕೇಂದ್ರ ಸರಕಾರ ದಲ್ಲಿ ಬಿಜೆಪಿ ಆಡಳಿತ ಮಾಡುತ್ತಿದೆ ಅಷ್ಟೇ. 135 ಕೋಟಿ ಜನರ ಸರಕಾರ ಅದು. ಪುಕ್ಕಟೆಯಾಗಿ ಅಕ್ಕಿಕೊಡುತ್ತಾರಾ? ರಾಜ್ಯದಿಂದ4.70 ಲಕ್ಷಕೋಟಿರೂ.ತೆರಿಗೆ ಪಾವತಿಸಲಾಗು ತಿದ್ದು, ನಮಗೆ 37 ಸಾವಿರ ಕೋಟಿ ರೂ. ಮಾತ್ರ ಜಿಎಸ್ಟಿ ಪರಿಹಾರ ನೀಡಲಾಗುತ್ತದೆ. ನಾವು ಮಾರುಕಟ್ಟೆಯಿಂದ ಅಕ್ಕಿ ತಂದು ಕೊಡುತ್ತೇವೆ. ಮಾತಿಗೆ ತಪ್ಪಲು ನಾವೇನು ಬಿಜೆಪಿಯವರಾ? ರಾಜ್ಯದಲ್ಲಿರುವ ದೊಡ್ಡದೊಡ್ಡ ಬಿಜೆಪಿ ನಾಯಕರು ಅಕ್ಕಿ ಕೊಡಿ ಎಂದು ಕೇಂದ್ರ ಸರಕಾರಕ್ಕೆ ಹೇಳಬೇಕಲ್ಲವೇ? ಎಂದು ಅವರು ಪ್ರಶ್ನೆ ಮಾಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ನಾಯಕರಾದ ಎ.ನಾರಾಯಣಸ್ವಾಮಿ, ಎಸ್.ರವಿ, ಪುಷ್ಪಾ ಅಮರನಾಥ್ ಸೇರಿದಂತೆ ಪ್ರಮುಖರಿದ್ದರು.