ಕಾರವಾರ : ಜಿಲ್ಲೆಯ ರೈತರು ತಮ್ಮ ಬೆಳೆಗಳಿಗೆ ಮಾಡಿಸಿರುವ ಬೆಳೆ ವಿಮೆಯ ಮೊತ್ತವನ್ನು, ಸದ್ರಿ ಬೆಳೆಯ ಹಾನಿಗೆ ತಕ್ಕಂತೆ ಪಾವತಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾವುದು, ರೈತರಿಗೆ ಯಾವುದೇ ಸಂದರ್ಭದಲ್ಲಿ ಪರಿಹಾರ ವಿತರಣೆ ಯಲ್ಲಿ ನಷ್ಟವಾಗಲು ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ರೈತ ಮುಖಂಡರು ಹಾಗೂ ಬೆಳೆ ವಿಮೆ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರ ಬೆಳೆ ಹಾನಿಯ ಸಮೀಕ್ಷೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಇಳುವರಿ ತಪ್ಪಾಗಿ ದಾಖಲು ಆಗದಂತೆ ಎಚ್ಚರ ವಹಿಸಬೇಕು ಎಂದರು.
ಬೆಳೆ ವಿಮೆ ನೀಡುವ ಸಂಸ್ಥೆಗಳು ರೈತರಿಂದ ಪಡೆದ ವಿಮಾ ಮೊತ್ತಕ್ಕೆ ಸೂಕ್ತ ರಸೀದಿ ಮತ್ತು ವಿಮೆ ಕುರಿತು ಸಂಪೂರ್ಣ ವಿವರಗಳನ್ನು ರೈತರಿಗೆ ನೀಡಬೇಕು. ವಿಮಾ ಮೊತ್ತ ಪಾವತಿ ಸೇರಿದಂತೆ ಬೆಳೆ ವಿಮೆ ಕುರಿತ ಸಮಸ್ಯೆಗಳನ್ನು ಬಗೆ ಹರಿಸಲು ವಿಮಾ ಸಂಸ್ಥೆಗಳು ಪ್ರತೀ 2 ತಾಲೂಕಿಗೆ ಒಂದು ಕಚೇರಿ ತೆರೆದು ಸಿಬ್ಬಂದಿ ನೇಮಕ ಮಾಡಿ , ರೈತರಿಗೆ ಸಮರ್ಪಕ ಸೇವೆ ಒದಾಗಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ರೈತರ ಸಮಸ್ಯೆ ಗಳನ್ನು ಜಿಲ್ಲಾಡಳಿತದ ಮೂಲಕ ಆದ್ಯತೆಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು , ಯಾವುದೇ ಸಂದರ್ಭದಲ್ಲೂ ಜಿಲ್ಲೆಯ ರೈತರಿಗೆ ನಷ್ಟ ಅಥವಾ ಮೋಸ ಆಗಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಸಭೆಯಲ್ಲಿ ರೈತರ ಮುಖಂಡರುಗಳು, ಕೃಷಿ ಇಲಾಖೆ ಅಧಿಕಾರಿಗಳು, ವಿಮಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.