ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಾಸಿಯಾಗದ ಕೊರೊನಾ! ಭಟ್ಕಳದಲ್ಲಿ ಸಿಬ್ಬಂದಿಗಳ ಕೊರತೆ; ಬಸ್ ಓಡಾಟದಲ್ಲಿ ವ್ಯತ್ಯಯ

Source: S O News service | By V. D. Bhatkal | Published on 19th November 2022, 8:14 PM | Coastal News | Special Report |

ಭಟ್ಕಳ: ಅದ್ಯಾವಾಗ ಕೊರೊನಾ ಎಂಬ ಮಹಾಮಾರಿ ಊರುಕೇರಿಗಳಿಗೆ ಒಕ್ಕರಿಸಿತೋ ಏನೋ, ಮೊದಲೇ ತೆವಳಿಕೊಂಡು ದಿನದೂಡುತ್ತಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಇನ್ನಷ್ಟು ರೋಗಗ್ರಸ್ಥವಾಗಿ ಹೋಯಿತು. ಇದೀಗ ಕೊರೊನಾ ಇಲ್ಲಿಂದ ದೂರ ಓಡಿ ಹೋಗಿದ್ದರೂ, ಸರಕಾರಿ ಬಸ್ಸುಗಳು ಮಾತ್ರ ನಿಲ್ಲಲಾಗದೇ, ಓಡಲಾಗದೇ ಪರಿತಪಿಸುತ್ತಿರುವುದು ಕಂಡು ಬಂದಿದೆ.

ಭಟ್ಕಳದ ಬಸ್ ಸೌಕರ್ಯ ಎನ್ನುವುದು ಇಲ್ಲಿನ ಬಸ್ ನಿಲ್ದಾಣದಂತೆ ಆಗಿಹೋಗಿದೆ. ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಬಸ್ ಪ್ರಯಾಣದ ಸ್ಥಿತಿಗತಿ ಕೊರೊನಾ ಸೋಂಕಿದಂತೆ ಎಳೆದುಕೊಂಡು ಹೋಗುತ್ತಿದೆ. ಭಟ್ಕಳದಲ್ಲಿ ಈ ಹಿಂದೆ ಇದ್ದ 72 ಸರಕಾರಿ ಬಸ್ಸುಗಳ ಸಂಖ್ಯೆ 65ಕ್ಕೆ ಕುಸಿದಿದೆ. ಮೊದಲಿದ್ದ ಸಿಬ್ಬಂದಿಗಳ ಸಂಖ್ಯೆಯೂ ಕೆಳಕ್ಕೆ ಇಳಿದಿದೆ. ಪರಿಣಾಮವಾಗಿ ಭಟ್ಕಳದಿಂದ ಮುಂಡಳ್ಳಿಗೆ ಪ್ರಯಾಣಿಸುತ್ತಿದ್ದ ಬಸ್ಸುಗಳನ್ನು 9 ರಿಂದ 3ಕ್ಕೆ ಇಳಿಸಲಾಗಿದೆ. ಅತ್ತ ದಿನಕ್ಕೆ 9 ಬಾರಿ ಅಳಿವೇಕೋಡಿಗೆ ಓಡುತ್ತಿದ್ದ ಬಸ್ಸುಗಳು 4ಕ್ಕೆ ಕುಸಿದಿದೆ. ಪ್ರತಿ ದಿನ 4 ಬಾರಿ ಅಬ್ರೆಗೆ ಪ್ರಯಾಣಿಸುತ್ತಿದ್ದ ಬಸ್ಸುಗಳನ್ನು 3ಕ್ಕೆ, ದಿನಕ್ಕೆ 3 ಬಾರಿ ಬೈಲೂರಿಗೆ ತೆರಳುತ್ತಿದ್ದ ಬಸ್ಸುಗಳನ್ನು 2ಕ್ಕೆ, ದಿನಕ್ಕೆ 6 ಬಾರಿ ಕುಳವಾಡಿಗೆ ಸಂಚರಿಸುತ್ತಿದ್ದ ಬಸ್ಸುಗಳನ್ನು 5 ಬಾರಿಗೆ ಸೀಮಿತಗೊಳಿಸಲಾಗಿದೆ.

ಕೊರೊನಾ ಕಾಟದ ನಂತರದ ದಿನಗಳಲ್ಲಿ ಕೆಲವು ಪ್ರದೇಶಗಳಿಗೆ ಓಡುತ್ತಿದ್ದ ಬಸ್ಸುಗಳ ಸಂಖ್ಯೆಯಲ್ಲಿ ಕಡಿತವಾಗಿರುವುದು ನಿಜ. ಲಭ್ಯ ಇರುವ ಬಸ್ಸು, ಸಿಬ್ಬಂದಿಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಪ್ರಯತ್ನ ಮುಂದುವರೆಸಿದ್ದೇವೆ
  - ದಿವಾಕರ, ವ್ಯವಸ್ಥಾಪಕರು, ಭಟ್ಕಳ ವಾರಸಾಸ ಡಿಪೋ 

ಈ ಹಿಂದೆ ಮಾರುಕೇರಿ ದೇವಿ ಮನೆಯತ್ತ ದಿನಕ್ಕೆ 2 ಬಾರಿ ಸಂಚರಿಸುತ್ತಿದ್ದ ಬಸ್ಸುಗಳನ್ನು ಇದೀಗ ತಡೆ ಹಿಡಿಯಲಾಗಿದೆ. ದಿರಿಂದಾಗಿ ಸಾರ್ವಜನಿಕರಿಗೆ ಬಸ್ ಪ್ರಯಾಣ ದುಸ್ತರವಾಗಿ ಪರಿಣಮಿಸಿದೆ. ಸಾಲದೆಂಬಂತೆ ದೂರದ ಗುಲ್ಬರ್ಗಾಕ್ಕೆ ಈ ಹಿಂದೆ ಇಬ್ಬರು ಚಾಲಕ, ಓರ್ವ ನಿರ್ವಾಹಕನನ್ನು ನಿಯೋಜಿಸಲಾಗುತ್ತಿತ್ತಾದರೂ ಇದೀಗ ಇಬ್ಬರೇ ಹೋಗಿ ಬನ್ನಿ ಎಂದು ಫರ್ಮಾನು ಹೊರಡಿಸಲಾಗಿದೆ.

ತಾಲೂಕಿನ ಗ್ರಾಮೀಣ ಪ್ರದೇಶವಾದ ಕುಳವಾಡಿಗೆ ಸದ್ಯ ಚಾಲಕರೋರ್ವರೇ ಹೋಗಿ ಬರುತ್ತಿದ್ದಾರೆ. ನಿತ್ಯ ಬೆಳಿಗ್ಗೆ 8.30 ಹಾಗೂ 9.30ಗೆ ಮಡಗಾಂವಗೆ ಪ್ರಯಾಣಿಸುತ್ತಿದ್ದ ಬಸ್ಸುಗಳಲ್ಲಿಯೂ ಚಾಲಕ, ನಿರ್ವಾಹಕನ ಕೆಲಸವನ್ನು ಚಾಲಕರೋರ್ವರೇ ನಿಭಾಯಿಸುತ್ತಿದ್ದಾರೆ.

ಇದು ಕೇವಲ ಭಟ್ಕಳದ ಸಮಸ್ಯೆ ಮಾತ್ರವಲ್ಲ, ಇಡೀ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯೇ ಕೊರೊನಾ ರೋಗದಿಂದ ಮುಕ್ತವಾಗಿಲ್ಲ ಎಂದು ಸಿಬ್ಬಂದಿಗಳೇ ದೂರುತ್ತಿದ್ದಾರೆ.

ಹೊಸ ಬಸ್ಸುಗಳಿಲ್ಲ, ವರ್ಗಾವಣೆಯೂ ಆಗಿಲ್ಲ:
ಸದ್ಯದ ಪರಿಸ್ಥಿತಿಯಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ಬಸ್ಸುಗಳ ಆಗಮನ ಸಲೀಸಾಗಿಲ್ಲ. ಹೊಸ ಬಸ್ಸುಗಳು ಬೇಕು ಎಂದರೆ ಸಚಿವರು, ಅಧಿಕಾರಿಗಳು ಇಲ್ಲ ಎನ್ನುವುದಿಲ್ಲ, ಆದರೆ ಹೊಸ ಬಸ್ ಬರಲು ಇನ್ನೊಂದು ವರ್ಷವೇ ಕಳೆಯಬಹುದು ಎನ್ನುತ್ತಾರೆ ಅಲ್ಲಿನ ಸಿಬ್ಬಂದಿಗಳು. ಅಲ್ಲದೇ ಇಲ್ಲಿನ ಸಿಬ್ಬಂದಿಗಳ ಕೊರತೆಯನ್ನು ಸರಿದೂಗಿಸಲು ಬೇರೆ ಬೇರೆ ಸಾರಿಗೆ ಸಂಸ್ಥೆಯಿಂದ 48 ಚಾಲಕ, ನಿರ್ವಾಹಕರನ್ನು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದ್ದರೂ, ಇದ್ದ ಸ್ಥಳದಿಂದ ಸಿಬ್ಬಂದಿಗಳನ್ನು ಕಳುಹಿಸಿಕೊಡುವ ಆದೇಶಕ್ಕೆ ಅಧಿಕಾರಿಗಳ ಸಹಿಯೇ ಬಿದ್ದಿಲ್ಲ!

ಹಾಗೇನಾದರೂ ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾದರೆ ಭಟ್ಕಳಕ್ಕೆ 6-7 ಸಿಬ್ಬಂದಿಗಳಾದರೂ ಬರುತ್ತಿದ್ದರು, ಅದು ಮತ್ತೆ ಯಾವಾಗಲೋ ಎನ್ನುತ್ತಾ ಇಲ್ಲಿನ ಸಿಬ್ಬಂದಿಗಳು ನಿಟ್ಟುಸಿರು ಬಿಡುತ್ತಾರೆ. ಬಸ್ಸುಗಳ ಕಥೆ ಹೀಗೆ ಆದರೆ ನಿಲ್ದಾಣದ ಕಥೆ ಹೇಗಿರಬೇಡ? ಹೈಟೆಕ್ ಎಂದು ಕಟ್ಟಲಾಗಿದ್ದ ನಿಲ್ದಾಣ ಮಣ್ಣಿನ ಹೊಂಡವಾಗಿಯೇ ಉಳಿದುಕೊಂಡಿದೆ. ಒಟ್ಟಾರೆಯಾಗಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಸಂಪೂರ್ಣ ಸೊರಗಿದಂತೆ ಕಂಡು ಬರುತ್ತಿದ್ದು, ಸಾರ್ವಜನಿಕರು ಸರಕಾರದತ್ತ ಎದುರು ನೋಡುತ್ತಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...