ರೈತರ ಆಂದೋಲನವು ಮೋದಿ ಸರಕಾರವನ್ನು ಮಂಡಿಯೂರುವಂತೆ ಮಾಡಿದುಹೇಗೆ ?

Source: Ajoy A Mahaprashasta/The wire/VB | By I.G. Bhatkali | Published on 20th November 2021, 5:43 PM | National News | Special Report |

ಪ್ರಧಾನಿ ನರೇಂದ್ರ ಮೋದಿಯವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತನ್ನ ಸರಕಾರದ ನಿರ್ಧಾರವನ್ನು ಶುಕ್ರವಾರ ಬೆಳಗ್ಗೆ ಪ್ರಕಟಿಸಿದ್ದು ಇದು ಮುಂಬರುವ ದಿನಗಳಲ್ಲಿ ರೈತರ ಸುದೀರ್ಘ ಆಂದೋಲನಕ್ಕೆ ದೊರೆತ ಮಹಾನ್ ವಿಜಯ ಎಂದು ನೆನಪಿಲ್ಲಿರಲಿದೆ. ಈವರೆಗೆ ಸರಕಾರವು ತನ್ನ ಪಟ್ಟನ್ನು ಸಡಿಲಿಸಿರಲಿಲ್ಲ. ಬಿಜೆಪಿ ನಾಯಕರು ರೈತರ ವಿರುದ್ಧ ಮಾಡಿದ್ದ ಟೀಕೆಗಳಿಗಂತೂ ಲೆಕ್ಕವೇ ಇಲ್ಲ ಸ್ವತಃ ಮೋದಿಯವರೂ ಪ್ರತಿಭಟನಾನಿರತ ರೈತರನ್ನು 'ಆಂದೋಲನ ಜೀವಿಗಳು' ಎಂದು ಸಂಸತ್ತಿನಲ್ಲಿ ಹೀಯಾಳಿಸಿದ್ದರು. ಖಲಿಸ್ತಾನಿ ಪ್ರತ್ಯೇಕವಾದಿಗಳು ರೈತರ ಪ್ರತಿಭಟನೆಯ ನೇತೃತ್ವವಹಿಸಿದ್ದಾರೆ ಮತ್ತು ಭಯೋತ್ಪಾದಕ ಗುಂಪುಗಳು ಹಣಕಾಸಿನ ನೆರವು ಒದಗಿಸುತ್ತಿವೆ ಎಂದು ಬ್ಯಾಂಡ್ ಮಾಡಲು ಬಿಜೆಪಿ ಪ್ರಯತ್ನಿಸಿತ್ತು.

ಆದಾಗ್ಯೂ ರೈತರು 'ಕಾರ್ಪೊರೇಟ್ ಪರ' ಮತ್ತು 'ಕೃಷಿಕ ವಿರೋಧಿ'ಎಂದು ತಾವು ನಂಬಿದ್ದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ತಮ್ಮ ಕರೆಗೆ ಬದ್ಧರಾಗಿದ್ದರು. ಕೃಷಿ ಕಾಯ್ದೆಗಳನ್ನು ಅಂಗೀಕರಿಸುವ ಮುನ್ನ ರೈತರೊಂದಿಗೆ ಸಮಾಲೋಚಿಸಲಾಗಿತ್ತು ಎಂದು ಸರಕಾರವು ಹೇಳಿಕೊಂಡಿತ್ತು, ಆದರೆ 2020 ಜೂನ್‌ನಲ್ಲಿ ಸುಗ್ರೀವಾಜ್ಞೆಗಳ ಮೂಲಕ ಈ ಕಾಯ್ದೆಗಳನ್ನು ಮೊದಲು ತರಲಾಗಿತ್ತು ಎನ್ನುವುದನ್ನು ಜನರಿಗೆ ನೆನಪಿಸಿದ್ದ ಪ್ರತಿಭಟನಾನಿರತ ಗುಂಪುಗಳು, ಈ ಕಾಯ್ದೆಗಳನ್ನು ಹಿಂಬಾಗಿಲಿನಿಂದ ತಮ್ಮ ಮೇಲೆ ಹೇರಲಾಗಿದೆ ಎನ್ನುವುದನ್ನು ಮನದಟ್ಟು ಮಾಡಿದ್ದು. ಪ್ರತಿಭಟನೆಯ ಪ್ರತಿಯೊಂದು ಹಂತದಲ್ಲಿಯೂ ರೈತರ ಆಂದೋಲನವನ್ನು ದಮನಿಸಲು ಬಿಜೆಪಿ ನೇತೃತ್ವದ ಸರಕಾರವು ಪ್ರಯತ್ನಿಸಿತ್ತು. ಅ.3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರವು ಅತ್ಯಂತ ಘೋರ ಪ್ರಸಂಗವಾಗಿತ್ತು. ನಾಲ್ವರು ರೈತರು ಸೇರಿದಂತೆ ಎಂಟು ಜನರು ಅಲ್ಲಿ ಕೊಲ್ಲಲ್ಪಟ್ಟಿದ್ದರು.

ಪ್ರತಿಭಟನೆಗಳ ಸಂದರ್ಭ 700ಕ್ಕೂ ಅಧಿಕ ಪ್ರತಿಭಟನಾನಿರತ ರೈತರು ಮೃತಪಟ್ಟಿದ್ದಾರೆ. ಹಲವರ ವಿರುದ್ಧ ಕಠಿಣ ಕಾನೂನುಗಳಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆಂದೋಲನವನ್ನು ಹತ್ತಿಕ್ಕಲು ಸರಕಾರವು ತನ್ನ ಪೊಲೀಸ್ ಬಲವನ್ನು ಬಳಸಿತ್ತು. ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದ ದಿಲ್ಲಿಯ ಸಿಂಘು ಮತ್ತು ಟಿಕ್ಕಿ ಗಡಿಗಳನ್ನು ವಸ್ತುಶಃ ಬಯಲು ಬಂದೀಖಾನೆಗಳನ್ನಾಗಿ ಪರಿವರ್ತಿಸಲಾಗಿತ್ತು. ಈ ವರ್ಷ ಗಣತಂತ್ರ ದಿನದ ಜಾಥಾದ ಬಳಿಕ ಕೆಲವು ರೈತ ನಾಯಕರು ಪೊಲೀಸರ ತೀವ್ರ ದಾಳಿಗೆ ಗುರಿಯಾಗಿದ್ದರು. ಆದರೂ ಕೃಷಿ ಕಾಯ್ದೆಗಳ ರದ್ದತಿಗಾಗಿ ಪ್ರತಿಭಟನೆಯನ್ನು ಮುಂದುವರಿಸುವ ತಮ್ಮ ದೃಢಸಂಕಲಕ್ಕೆ ರೈತರು ಗಟ್ಟಿಯಾಗಿ ಅಂಟಿಕೊಂಡಿದ್ದರು. ದಿಲ್ಲಿಯ ಗಾಝಿಪುರ ಗಡಿಯಲ್ಲಿ ಗಣತಂತ್ರ ದಿನದ ಜಾಥಾದ ಬಳಿಕ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಅವರ ವಿರುದ್ಧ ಪೊಲೀಸರ ದಬ್ಬಾಳಿಕೆಯು ಪ್ರತಿಭಟನೆಗೆ ಹೊಸ ಜೀವವನ್ನು ನೀಡಿತ್ತು ಮತ್ತು ಚುನಾವಣೆಗಳು ಸನ್ನಿಹಿತವಾಗಿರುವ ಉತ್ತರ ಪ್ರದೇಶದಾದ್ಯಂತ ಪ್ರತಿಭಟನೆಗಳು ವ್ಯಾಪಿಸಿಕೊಂಡಿದ್ದವು.

ರೈತರ ಪ್ರತಿಭಟನೆಯು ಕೇಂದ್ರ ಸರಕಾರವನ್ನು ಮಂಡಿಯೂರುವಂತೆ ಮಾಡಿದೆ ಎನ್ನುವುದನ್ನು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಧಾನಿಯವರ ನಿರ್ಧಾರವು ಸೂಚಿಸುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಮೋದಿ ಸರಕಾರವು ಜನಪರ ಆಂದೋಲನಗಳನ್ನು ತಿರಸ್ಕರಿಸಿದ ಕುಖ್ಯಾತಿಯನ್ನು ಹೊಂದಿದೆ. ಪ್ರತಿಭಟನಾನಿರತ ಗುಂಪುಗಳ ಬೇಡಿಕೆಗಳನ್ನು ಒಪ್ಪಿಕೊಳ್ಳುವುದನ್ನೂ ತಿರಸ್ಕಾರದಿಂದ ನೋಡಲಾಗಿತ್ತು ಅಥವಾ ಹಾಗೆ ಮಾಡಿದರೆ ತನ್ನನ್ನು ತಾನು ಪ್ರಬಲ ಮತ್ತು ನಿರ್ಣಾಯಕ ಎಂದು ಬಿಂಬಿಸಿಕೊಳ್ಳುವ ಗೀಳು ಹೊಂದಿರುವ ಸರಕಾರದ ದೌರ್ಬಲ್ಯದ ಸಂಕೇತವಾಗುತ್ತದೆ ಎಂದು ಭಾವಿಸಲಾಗಿತ್ತು. ಸರಕಾರದ ಈ ಅಹಂ ಅದು ಸರ್ವಾಧಿಕಾರಿ ನಿಲುವುಗಳನ್ನು ತಳೆಯಲು ಹೆಚ್ಚು ಕಾರಣವಾಗಿತ್ತು.

ಮತ್ತೊಂದೆಡೆ ರೈತರ ಆ೦ದೋಲನವು ಆರಂಭಗೊಂಡಾಗಿನಿಂದಲೂ ಕ್ರಿಯಾಶೀಲವಾಗಿ ವಿಕಸನಗೊಂಡಿತ್ತು. ಪಂಜಾಬಿನಲ್ಲಿ ಮಾತ್ರ ಬೇರುಗಳನ್ನು ಹೊಂದಿದ್ದ ಪ್ರತಿಭಟನೆಯು ದೇಶವ್ಯಾಪಿ ಆಂದೋಲನವಾಗಿ ರೂಪುಗೊಂಡಿತ್ತು. ರೈತರ ಗುಂಪುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿದ್ದವು ಮತ್ತು ಪ್ರಬಲ ಸರಕಾರದ ವಿರುದ್ಧ ಎದ್ದು ನಿಂತಿದ್ದವು. ಆಂದೋಲನವ್ಯಾಪಕಗೊಳ್ಳುತ್ತಿದ್ದಂತೆ ಬಹು ಜಾತಿಗಳ ಮತ್ತು ಸಮುದಾಯಗಳ ವಿರೋಧಾಭಾಸಗಳು ಮಸುಕಾಗಿದ್ದವು. ಪ್ರತಿ ಬಾರಿಯೂ ಆಂದೋಲನಕ್ಕೆ ಹಿನ್ನಡೆಯುಂಟಾದಾಗ ಅದು ಮೊದಲಿಗಿಂತ ಹೆಚ್ಚು ಬಲಿಷ್ಠವಾಗಿ ಹೊರಹೊಮ್ಮಿತ್ತು. ಎಲ್ಲ ಪ್ರತಿಭಟನಾ ಸ್ಥಳಗಳಲ್ಲಿ ಅನುರಣಿಸಿದ್ದ 'ಕಿಸಾನ್ ಏಕತಾ ಜಿಂದಾಬಾದ್' ಘೋಷಣೆಯು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ದೊರಕದ ಹಲವಾರು ರೈತರಿಗೆ ಸ್ಫೂರ್ತಿಯ ಕರೆಯಾಗಿತ್ತು.

ಕಳೆದ ಕೆಲವು ತಿಂಗಳುಗಳಲ್ಲಿ ರೈತರ ಪ್ರತಿಭಟನೆಯು ಬಿಜೆಪಿಯ ಧ್ರುವೀಕರಣ ತಂತ್ರದ ವಿರುದ್ದರಾಜಕೀಯ ಚಳವಳಿಯಾಗಿ ಬೆಳೆದಿತ್ತು. ಅದು 2013ರಲ್ಲಿ ಉತ್ತರ ಪ್ರದೇಶದ ಮುಝಫರ್‌ನಗರದಲ್ಲಿ ಸಂಭವಿಸಿದ್ದ ದಂಗೆಗಳ ಬಳಿಕ ಪರಸ್ಪರ ದೂರವಾಗಿದ್ದಜಾಟ್ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಉದ್ವಿಗ್ನತೆಯನ್ನು ಮನಿಸಲು ನೆರವಾಗಿತ್ತು ಆಂದೋಲನವು ಹಲವಾರು ಸಮುದಾಯಗಳನ್ನು ಒಟ್ಟುಗೂಡಿಸುವ ವೇದಿಕೆಯಾಗಿ ರೂಪುಗೊಂಡಿತು. ಪ.ಬಂಗಾಳದಲ್ಲಿ ಬಿಜೆಪಿ ವಿರುದ್ದ ತೀವ್ರ ಪ್ರಚಾರ ಅಭಿಯಾನವನ್ನು ನಡೆಸಿದ್ದ ರೈತ ನಾಯಕರು ರಾಜ್ಯದಲ್ಲಿ ಅದರ ಹೀನಾಯ ಸೋಲಿಗೆ ತಮ್ಮ ನಿರ್ಣಾಯಕ ಕೊಡುಗೆಯನ್ನು ಸಲ್ಲಿಸಿದ್ದರು. ಹಲವಾರು ಗ್ರಾಮಗಳು ಬಿಜೆಪಿ ನಾಯಕರನ್ನು ಪ್ರಚಾರಕ್ಕಾಗಿ ಒಳಗೂ ಬಿಟ್ಟುಕೊಂಡಿರಲಿಲ್ಲ. ಹಲವಾರು ರಾಜ್ಯಗಳಲ್ಲಿ ಕೆಳಸ್ತರದ ಬಿಜೆಪಿ ನಾಯಕರು ಇತರ ಪಕ್ಷಗಳಿಗೆ ವಲಸೆ ಹೋಗುವುದಕ್ಕೂ ಇದೇ ರೈತರ ಆಂದೋಲನ ಕಾರಣವಾಗಿತ್ತು.

ಪ್ರತಿಯೊಂದು ಅಂಶದಲ್ಲಿಯೂ ರೈತರ ಆಂದೋಲನವು ಉದಾಹರಣೆಯೊಂದನ್ನು ಸ್ಥಾಪಿಸಿದ್ ಮತ್ತು ಸಮುದಾಯಗಳ ಆಧಾರದಲ್ಲಿ ಸಮಾಜವನ್ನು ಧ್ರುವೀಕರಿಸುವ ರಾಜಕೀಯ ಪಕ್ಷಗಳ ಪ್ರಯತ್ನಗಳನ್ನು ವಿಫಲಗೊಳಿಸಲು ಮಾರ್ಗವನ್ನು ತೋರಿಸಿದೆ. ಮುಝಫರ್‌ನಗರ ದಂಗೆಗಳ ಬಳಿಕ ಜಾಟರು ಮತ್ತು ಮುಸ್ಲಿಮರ ನಡುವಿನ ದ್ವೇಷದ ಏಕೈಕ ಫಲಾನುಭವಿಯಾಗಿದ್ದಬಿಜೆಪಿ ಹರ್ಯಾಣದಲ್ಲಿಯೂ ಬಹುಸಂಖ್ಯಾತ ಜಾಟರನ್ನು ಇತರ ಸಣ್ಣ ಸಮುದಾಯಗಳ ವಿರುದ್ಧ ಎತ್ತಿಕಟ್ಟುವ ಮೂಲಕ ಚುನಾವಣೆಯಲ್ಲಿ ಧ್ರುವೀಕರಣದ ಲಾಭವನ್ನು ಪಡೆದಿತ್ತು.

ರೈತರ ಆಂದೋಲನವನ್ನು ಎಲ್ಲ ರೀತಿಗಳಿಂದಲೂ ತಿರಸ್ಕರಿಸಿದ ಬಳಿಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮೋದಿಯವರ ಪ್ರಕಟನೆಯು ಅದೇ ಸಿನಿಕತನವನ್ನು ಧ್ವನಿಸಿದೆ. ಚಳವಳಿಯನ್ನು ಮಟ್ಟಹಾಕಲು ಪ್ರಯತ್ನಿಸಿದ್ದರೂ ಪ್ರಧಾನಿ ರೈತರ ನೆರವಿಗಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುವ ಬಗ್ಗೆ ಮಾತನಾಡಿದ್ದಾರೆ. ರೈತರ ಏಳಿಗೆಗೆ ಸರಕಾರದ ಬದ್ಧತೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ರೈತರಿಗೆ ಸತ್ಯವನ್ನು ವಿವರಿಸಲು ತನ್ನ ಅಸಮರ್ಥತೆಯ ಬಗ್ಗೆಯೂ ಹೇಳಲು ಮರೆಯಲಿಲ್ಲ.

ಉ.ಪ್ರದೇಶ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳ ಮುನ್ನ ಮೋದಿ ಯವರ ನಿರ್ಧಾರವು ಹೊರಬಿದ್ದಿದೆ. ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಂತಿದೆ.

ಮೋದಿ ನಿರ್ಧಾರವು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲ ಕಲ್ಪಿಸುವ ಪ ಇನ್ನಷ್ಟು ಹಾನಿಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಗುರುನಾನಕ ಜಯಂತಿಯಂದು ಪ್ರತಿಭಟನಾನಿರತ ರೈತರಿಗೆ ಉಡುಗೊರೆ ಎಂದು ಮೋದಿ ಈ ಕ್ರಮವನ್ನು ಬಿಂಬಿಸಿರಬಹುದು. ಆದರೆ ರೈತರ ಆಂದೋಲನವು ಮೋದಿಯವರನ್ನು ಇತರ ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲದ ಘಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುವುದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ.

ರೈತರ ಆಂದೋಲನಕ್ಕೆ ಸಿಕ್ಕಿರುವ ಗೆಲುವು ಕಳೆದ ಏಳು ವರ್ಷಗಳಲ್ಲಿ ಮೋದಿ ಸರಕಾರದ ನಿಜವಾದ ಸೋಲು ಕೂಡ ಆಗಿದೆ. ಹಾಗೆ ನೋಡಿದರೆ ಇದು ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸಂದರ್ಭವೂ ಆಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...