ಕಾರವಾರ: ಗೋಕರ್ಣ ತಾಲೂಕಿನ ಗಂಗೆಕೊಳ್ಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯ ಅರಿವು ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯ ಅಧಿಕಾರಿ ಆಜ್ಞಾ ನಾಯಕ ಮಂಗಳವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಹದಿ ಹರೆಯದವರ ಒತ್ತಡ ಮತ್ತು ಒತ್ತಡದ ಜೀವನಗಳಿಂದ ಹೊರಬರಲು ರೂಢಿಸಿಕೊಳ್ಳಬೇಕಾದ ಜೀವನ ಕೌಶಲ್ಯಗಳು, ಸ್ವಯಂ ಸ್ವಚ್ಛತೆ, ಋತು ಸ್ರಾವದ ಸ್ವಚ್ಛತೆ, ರಕ್ತ ಹೀನತೆಯ ನಿಯಂತ್ರಣ, ಸ್ಥಳೀಯವಾಗಿ ದೊರಕುವ ಪೋಷಕಾಂಶಯುಕ್ತ ಆಹಾರ ವಸ್ತುಗಳ ಬಳಕೆ, ಪೋಷಣ ಅಭಿಯಾನ, ಶಾಲೆ- ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ಕಬ್ಬಿಣಾಂಶ ಮಾತ್ರೆ ನೀಡುವ ( ವಿಪ್ಸ) ಕಾರ್ಯಕ್ರಮ, ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಾಗಿ ಸ್ನೇಹಾ ಕ್ಲಿನಿಕ್ ಸೌಲಭ್ಯ, ಶುಚಿ ಪ್ಯಾಡ್ಗಳ ಬಳಕೆಯ ಕುರಿತಾಗಿ ವಿವರವಾದ ಮಾಹಿತಿಯನ್ನು ನೀಡಿದರು.
ಮಾಹಿತಿ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಲ್ಲಿ ಇರುವ ಆರೋಗ್ಯ ಸಮಸ್ಯೆಗಳ ಕುರಿತಾದ ಸಂದೇಹಗಳಿಗೆ ಉತ್ತರಿಸಿ ಹದಿಹರೆಯದವರಲ್ಲಿ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ. ನಾಯ್ಕ, ಆಪ್ತ ಸಮಾಲೋಚಕ ಪ್ರದೀಪ ನಾಯ್ಕ, ವಸತಿ ಶಾಲೆಯ ಪ್ರಾಚಾರ್ಯ ಎನ್.ಆರ್. ನಾಯಕ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಸಂಸ್ಥೆಯ ಮಹಿಳಾ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.