ಕಾರವಾರ: ನದಿ ಅಥವಾ ಸಮುದ್ರ ಭಾಗದಲ್ಲಿ ವಾಸಿಸುವ ರೈತರು ಪ್ರವಾಹಕ್ಕೆ ಅಂಜಿ ಕೃಷಿ ಭೂಮಿ ಇದ್ದರೂ ಸಹ ಬೆಳೆ ಬೆಳೆಯಲು ಹಿಂದೇಟು ಹಾಕುತ್ತಾರೆ. ಮನಸಿದ್ದರೆ ಮಾರ್ಗ ಅನ್ನೋ ನಂಬಿಕೆಯಿAದ ಕೆಲವು ರೈತರು ಅಡಿಕೆ ತೋಟ ನಿರ್ಮಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಅಂಕೋಲ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನದಿಯ ದಡದಲ್ಲಿರುವ ಅನೇಕ ರೈತರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಧನ ಪಡೆದು ತಮ್ಮ ಪಾಳು ಬಿದ್ದಿದ್ದ ಭೂಮಿಯಲ್ಲಿ ಅಡಿಕೆ ಬೆಳೆದು ಮಾದರಿಯಾಗಿದ್ದಾರೆ.
ಹೊಸತೋಟ ನಿರ್ಮಾಣಕ್ಕೆ ಮುಂದಾದ ಅದೆಷ್ಟೋ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ತೋಟಗಾರಿಕಾ ಇಲಾಖೆಯಡಿ ಎಕರೆಗೆ ಅಂದಾಜು 68,000ರೂ. ವೆಚ್ಚದಲ್ಲಿ ಸುಮಾರು ಅರ್ಧ ಎಕರೆ ವಿಸ್ತೀರ್ಣದಲ್ಲಿ ನೆಲ ಸಮಗೊಳಿಸಿ ಅಡಿಕೆ ಗಿಡಗಳನ್ನು ನೆಟ್ಟು ಉತ್ತಮ ಫಲ ಪಡೆಯುತ್ತಿದ್ದಾರೆ. ಇನ್ನು ಈ ರೈತರ ತೋಟಗಳಲ್ಲಿ ಕಾಲುವೆ ತಡೆಗೋಡೆಗಳನ್ನು ಸಹ ನಿರ್ಮಿಸಲಾಗಿದ್ದು ಈಗಾಗಲೇ ಸುಮಾರು 20-25 ಎಕರೆ ತೋಟಗಳಿಗೆ ಅನುಕೂಲ ಕಲ್ಪಿಸುವಲ್ಲಿ ಖಾತ್ರಿ ಕೆಲಸ ಕೃಷಿಕರ ಕೈ ಹಿಡಿದಿದೆ.
ಕಳೆದ 6-8 ವರ್ಷಗಳ ಹಿಂದೆ ನಿರ್ಮಿಸಿದ್ದ ತೋಟ ಈಗ ಇಳುವರಿ ನೀಡುತ್ತಿದ್ದು, 2ರಿಂದ 2.5ಕ್ವಿಂಟಾಲ್ ವರೆಗೂ ಆದಾಯ ನೀಡುತ್ತಿದೆ. ಅಲ್ಲದೆ ಪೂರ್ಣ ಪ್ರಮಾಣದ ಇಳುವರಿ ಬಂದ ಮೇಲೆ 6-8ಕ್ವಿಂಟಾಲ್ ವರೆಗೂ ಇಳುವರಿ ಪಡೆಯಬಹುದಾಗಿದೆ ಎಂದು ಫಲಾನುಭವಿ ರೈತ ರಾಘವೇಂದ್ರ ಪಟಗಾರ್ ಸಂತಸ ಹಂಚಿ ಕೊಂಡರು.