ಕಾರವಾರ : ರಾಜ್ಯದಲ್ಲಿ ರೈತರಿಗೆ ಮತ್ತು ಅನ್ಯ ಭೂಮಾಲೀಕರಿಗೆ ತಿರುಗಾಡಲು ಇರುವ ದಾರಿ ಸಮಸ್ಯೆಯನ್ನು ಬಗೆಹರಿಸುವ ದೃಷ್ಠಿಯಿಂದ ಸರ್ಕಾರವು ದಿನಾಂಕ:20-10-2023 ರಂದು ಸುತ್ತೋಲೆಯನ್ನು ಹೊರಡಿಸಿತ್ತು. ದಾರಿ ಸಮಸ್ಯೆಯನ್ನು ಗುರುತಿಸಿ ಆಧ್ಯತೆಯ ಮೇಲೆ ಬಗೆಹರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ದಾರಿ ಸಮಸ್ಯೆ ಪ್ರಕರಣಗಳು ಅನೇಕ ಇದೆ. ಈ ಪ್ರಕರಣಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮಂಗಳವಾರ ಕಾರವಾರ ತಾಲೂಕಿನ ಚಿತ್ತಾಕುಲಾ ಗ್ರಾಮದ ಸ.ನಂ 211 ರಲ್ಲಿ ಸುಮಾರು 5-6 ವರ್ಷಗಳಿಂಖದ ಉದ್ಭವಿಸಿರುವ ದಾರಿ ಸಮಸ್ಯೆಯನ್ನು ಬಗೆಹರಿಸಲು ಭೂಮಾಲೀಕರು, ತಹಶೀಲದ್ದಾರ ಕಾರವಾರ, ತಾಲೂಕಾ ಭೂಮಾಪಕರು, ಕಂದಾಯ ನಿರೀಕ್ಷಕ ಸಾವಂತವಾಡ, ಗ್ರಾಮ ಆಡಳಿತಾಧಿಕಾರಿ ಚಿತ್ತಾಕುಲಾ ಇವರನ್ನು ಕರೆಯಿಸಿ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ ದಾರಿಯನ್ನು ಬಿಡಿಸಿ ನೀಡಲು ತಹಶೀಲ್ದಾರ ಕಾರವಾರ ರವರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.
ದಾರಿ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆಯಾಗಿರುತ್ತದೆ. ಮನೆಗೆ ತೆರಳಲು ದಾರಿ ಇಲ್ಲದೇ ಬಳಲುತ್ತಿದ್ದ ಭೂಮಾಲೀಕರಾದ ಔದಂಬರ ಆಪಾ ನಾಯ್ಕ ಇವರು ಮಾನ್ಯ ಜಿಲ್ಲಾಧಿಕಾರಿ ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.