ಭಟ್ಕಳ: ಹಾಡುಹಗಲೇ ವಾಹನ ತಡೆದು ಹಲ್ಲೆ; ದೂರು ದಾಖಲು
ಭಟ್ಕಳ: ಹಾಡುಹಗಲೇ ವಾಹನವೊಂದನ್ನು ತಡೆದು ಇಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವರಲ್ಲಿದ್ದ ಹಣ ಹಾಗೂ ಮುಬೈಲ್ ದೋಚಿಕೊಂಡು ಪರಾರಿಯಾದ ಘಟನೆ ಶನಿವಾರ ರಾ.ಹೆ.66ರ ಐಸ್ ಫ್ಯಾಕ್ಟರಿ ಬಳಿ ಜರಗಿದೆ.
ಹಲ್ಲೆಗೊಳಗಾದವರನ್ನು ಕುಂದಾಪುರ ತಲ್ಲೂರು ನಿವಾಸಿಗಳಾದ ಕಷ್ಣ ಪುಜಾರಿ ಹಾಗೂ ಗುರುರಾಜ ಶೆಟ್ಟಿ ಎಂದು ಗುರುತಿಸಲಾಗಿದೆ.
ಉಪ್ಪಿನ ಕಾಯಿ ವಿತರಕರಾಗಿರುವ ಇವರು ಮುರುಡೇಶ್ವರದಲ್ಲಿ ಉಪ್ಪಿನಕಾಯಿಯನ್ನು ವಿತರಿಸಿ ಕುಂದಾಪುರಕ್ಕೆ ತಮ್ಮ ವಾಹನದಲ್ಲಿ ಮರಳುತ್ತಿದ್ದಾಗ ಹಿಂಬದಿಯಿಂದ ಎರಡು ಬೈಕ್ ನಲ್ಲಿ ಬಂದ ಐದಾರು ಜನ ಏಕಾಎಕಿ ತಮ್ಮ ವಾಹನಕ್ಕ ಹಿಂಬದಿಯಿಂದ ಕಲ್ಲನ್ನು ಎಸೆದು ಕಾರಿನ ಗಾಜನ್ನು ಪುಡಿಗೈದಿದ್ದು ಅಲ್ಲದೆ ನಮ್ಮನ್ನು ಕಾರಿನಿಂದ ಹಿಡಿದೆಳೆದು ನಮ್ಮ ಮೇಲೆ ಹಲ್ಲೆಗೈದು ನಮ್ಮಲ್ಲಿರುವ ನಾಲ್ಕು ಸಾವಿರ ನಗದು ಹಾಗೂ ಮುಬೈಲನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹಲ್ಲೆಗೊಳಗಾದ ಕೃಷ್ಟ ಪುಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತಂತೆ ಗ್ರಾಮೀಣ ಠಾಣಾ ಪೊಲೀಸರು ಇದೊಂದು ಪರಸ್ಪರ ಜಗಳ ಪ್ರಕರಣವಾಗಿದ್ದು ಓವರ್ ಟೇಕ್ ಮಾಡುವ ಸಂಬಂಧ ಎರಡು ವಾಹನಗಳ ಮಧ್ಯೆ ಪೈಪೋಟಿ ನಡೆದು ನಂತರ ಜಗಳದ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಈ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಿಸಲಾಗಿದೆ ಎಂದು ತಿಳಿದುಬಂದಿದೆ.