ಭಟ್ಕಳ: ಪಕ್ಕದ ಶಿರೂರು ಅಳ್ವೆಗದ್ದೆ ಬಂದರಿನಿಂದ 2ಕಿಮೀ ದೂರದಲ್ಲಿ ಅರಬಿ ಸಮುದ್ರದಲ್ಲಿ ಸೋಮವಾರ ನಸುಕಿನ ವೇಳೆ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಮೀನು ಗಾರರು ಮೃತಪಟ್ಟಿರುವ ಬಗ್ಗೆ ವರದಿ ಯಾಗಿದೆ.
ಮೃತರನ್ನು ಶಿರೂರು ಹಡವಿನಕೋಣೆ ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಮಗ ಅಬ್ದುಲ್ ಸತ್ತಾರ್(45) ಹಾಗೂ ಭಟ್ಕಳದ ಕಿದ್ವಾಯಿ ರಸ್ತೆಯ ಅಹ್ಮದ ಚಡುಬಾಪಾ ಮಿಸ್ಬಾ ಎಂಬವರ ಮಗ ಮುಹಮ್ಮದ್ ಯೂಸುಫ್ ಮಿಸ್ಬಾ (47) ಎಂದು ಗುರುತಿಸಲಾಗಿದೆ.
ಇವರು ಡಿ.17ರಂದು ರಾತ್ರಿ 9:30ರ ಸುಮಾರಿಗೆ ಬೀಬಿ ಅಸ್ಥಾ ಮಾಲಕತ್ವದ ನುಮೈರ್ ಅಜುಮ್ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಶಿರೂರು ಅಳೇಗದ್ದೆ ಬಂದರಿನಿಂದ ಸುಮಾರು 2 ಕೀ.ಮಿ ದೂರದ ಸಮುದ್ರದಲ್ಲಿ ಮೀನಿಗೆ ಗಾಳವನ್ನು ಹಾಕುತ್ತಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಗಾಳವನ್ನು ಎಳೆಯುತ್ತಿರುವಾಗ ಸಮುದ್ರದ ಬೃಹತ್ ಅಲೆಗೆ ಸಿಲುಕಿ ದೋಣಿ ಮುಗಿಚಿ ಬಿತ್ತೆನ್ನಲಾಗಿದೆ. ಪರಿಣಾಮ ದೊಣಿಯಲ್ಲಿದ್ದ ಇಬ್ಬರು ಮೀನುಗಾರರು ಸಮುದ್ರ ನೀರಿಗೆ ಬಿದ್ದರು. ಕೂಡಲೇ ಸಮೀಪದ ದೋಣಿಯಲ್ಲಿದ್ದ ಮಾಮ್ಲು, ಯಾಕೂಬ್ ಮುಹಮ್ಮದ್ ಈ ಇಬ್ಬರಿಗೆ ಸಮುದ್ರ ನೀರಿನಿಂದ ಮೇಲೆ ಎತ್ತಿ ದೋಣಿಯಲ್ಲಿ ಶಿರೂರು ಗ್ರಾಮ ಕಳಿಹಿತ್ತು ಸಮುದ್ರ ದಡಕ್ಕೆ ಕರೆ ತಂದರು, ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸತ್ತಾರ್ ಮತ್ತು ಯೂಸುಫ್ ಮೃತಪಟ್ಟರು.
ಅಬ್ದುಲ್ ಸತ್ತಾರ್ ಪತ್ನಿ ಹಾಗೂ 5ವರ್ಷದ ಮಗುವನ್ನು ಅಗಲಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಳೆದ ಆಗಸ್ಟ್ 27ರಂದು ಶಿರೂರು ಅಳ್ವೆಗದ್ದೆ ಸಮುದ್ರದಲ್ಲಿ ಸಂಭವಿಸಿದ್ದ ದೋಣಿ ದುರಂತದಲ್ಲಿ ಗಂಗೊಳ್ಳಿಯ ಮುಹಮ್ಮದ್ ಮುಸಾಬ್ ಮತ್ತು ನಝಾನ್ ಮೃತಪಟ್ಟಿದ್ದರು.