ಸಾವಿರಾರು ಭಕ್ತರ ಜಯಘೋಷದೊಂದಿಗೆ ನಡೆದ ಮಹಾರಥೋತ್ಸವ
ಭಟ್ಕಳ: ರಾಮನವಮಿಯಂದು ನಡೆಯುವ ಗ್ರಾಮ ದೇವತೆ ಚೆನ್ನಪಟ್ಟಣ ಶ್ರೀ ಹನೂಮಂತ ದೇವರ ಮಹಾರಥೋತ್ಸವ ರವಿವಾರದಂದು ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮ ಸಡಗರದಿಂದ ನೆರವೇರಿತು.
ಪ್ರತಿವರ್ಷವೂ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಯುಗಾದಿಯ ಮಾರನೇ ದಿನದಂದು ಪ್ರಾರಂಭವಾಗಿ ರಾಮನವಮಿಯಂದು ಮಹಾರಥೋತ್ಸವ ನಡೆಯುತ್ತದೆ. ಈ ವರ್ಷವೂ ಕೂಡಾ ರಾಮನವಮಿಯ ಮಾರನೆಯ ದಿನ ಧ್ವಜಸ್ಥಂಭಕ್ಕೆ ಗರುಡನ ಫೋಟೋವನ್ನು ಕಟ್ಟುವ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.
ಮಹಾರಥವನ್ನು ಎಳೆಯುವ ಪೂರ್ವದಲ್ಲಿ ರಥೋತ್ಸವಕ್ಕೆ ಬಂದು ಸಾಂಗವಾಗಿ ನೆರವೇರಿಸಿಕೊಡುವಂತೆ ಶ್ರೀ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ವಿಶೇಷ ಆಹ್ವಾನಿತರಿಗೆ ಆಮಂತ್ರಣ ಕೊಡುವ ಪದ್ಧತಿ ಇದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆಮಂತ್ರಣ ಕೊಡುವ ಪದ್ಧತಿಯನ್ನು ಮುಗಿಸಿ ಸಂಜೆ ರಥೋತ್ಸವಕ್ಕೂ ಪೂರ್ವ ಗಣ್ಯರಿಗೆ ತೆಂಗಿನಕಾಯಿಯನ್ನು ಕೊಡುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ತಾಂತ್ರಿಕರಾದ ವೇ. ಮೂ. ರಮಾನಂದ ಅವಭೃತರು ನೆರವೇರಿಸಿಕೊಟ್ಟರು. ರಥೋತ್ಸವದಲ್ಲಿ ಶಾಸಕ ಮಂಕಾಳ ಎಸ್. ವೈದ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಮೊಗೇರ, ಪ್ರಧಾನ ಕಾರ್ಯದರ್ಶಿ ಶಿವರಾಮ ಟಿ. ನಾಯ್ಕ, ಸದಸ್ಯರುಗಳಾದ ಉಮಾನಾಥ ಭಟ್ಕಳ, ಲತಾ ಎಲ್. ಪೈ, ಸವಿತಾ ದೇವಡಿಗ, ಮಂಗಳ ಗೊಂಡ, ನಾಗೇಶ ಎಂ. ಪೈ, ಗಣಪತಿ ಎ. ಆಚಾರ್ಯ, ಅರ್ಚಕ ಶ್ರೀಧರ ಎನ್. ಭಟ್ಟ, ಪ್ರಮುಖರಾದ ಮಾಜಿ ಶಾಸಕ ಜೆ.ಡಿ.ನಾಯ್ಕ, ಸುನಿಲ್ ನಾಯ್ಕ, ಆರ್.ಜಿ.ಕೊಲ್ಲೆ, ವಸಂತ ಖಾರ್ವಿ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ಎಲ್. ಕೆ. ಮೊಗೇರ, ಎಂ. ಆರ್. ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ರಘುವೀರ ಬಾಳ್ಗಿ, ಶಾಂತಾರಾಮ ಭಟ್ಕಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಾತ್ರೆಯ ಪ್ರಯುಕ್ತ ಭಟ್ಕಳದಲ್ಲಿಯೇ ಮೊಕ್ಕಾಂ ಹೂಡಿರುವ ಎಸ್.ಪಿ. ವಿನಾಯಕ ಪಾಟೀಲ್, ಹೆಚ್ಚುವರಿ ಗೋಪಾಲ್ ಬ್ಯಾಕೋಡ್, ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ಸಿಪಿಐ ಗಣೇಶ ಕೆ.ಎಲ್., ವಿವಿಧ ಭಾಗಗಳಿಂದ ಆಗಮಿಸಿದ ಸರ್ಕಲ್ ಇನ್ಸಪೆಕ್ಟರ್ಗಳು, ಸಬ್ ಇನ್ಸಪೆಕ್ಟರ್ಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ ಕಾರ್ಯ ನೆರವೇರಿಸಿದರು.