ಭಟ್ಕಳ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಯಾವುದೇ ರೀತಿಯ ಅನುದಾನ ಹೆಚ್ಚಳ ಮಾಡದೆ ಜನ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿ.ಐ.ಟಿ.ಯು ವತಿಯಿಂದ ಶನಿವಾರ ಕೇಂದ್ರ ಬಜೆಟ್ ನ ನಕಲು ಪ್ರತಿಯನ್ನು ದಹಿಸುವುದರ ಮೂಲಕ ಪ್ರತಿಭಟನೆ ನಡೆಸಿದ್ದು ಈ ಸಂಬಂಧ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಐಸಿಡಿಎಸ್ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ನೌಕರರು ಕಳೆದ 42 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದು ಬಜೆಟ್ ನಲ್ಲಿ ಅಂಗನವಾಡಿ ನೌಕರರ ವೇತನ ಹೆಚ್ಚು ಮಾಡದೆ ತೀವ್ರ ಅನ್ಯಾಯವೆಸಗಿದ ಕೇಂದ್ರ ಸರ್ಕಾರ ನೌಕರ ವಿರೋಧಿ ದೋರಣೆ ತಾಳಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅನುದಾನ ಕಡಿತ, ಖಾಸಗೀಕರಣ, ನೇರ ನಗದು ವರ್ಗಾವಣೆ, ತಾಯಂದಿಯರಿಗೆ ಅಂಚೆ ಮೂಲಕ ಪ್ಯಾಕೇಟ್ ಒಣ ಆಹಾರ ಕೊಡಲು ಮುಂದಾಗುತ್ತಿರುವ ನೀತಿಯನ್ನು ತೀವ್ರವಾಗಿ ವಿರೋಧಿಸಲಾಗಿದೆ.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಅಧ್ಯಕ್ಷೆ ಪುಷ್ಪಾವತಿ ನಾಯ್ಕ, ಕಾರ್ಯದರ್ಶಿ ಸುಧಾ ಭಟ್, ಖಜಾಂಚಿ ಕವಿತಾ ನಾಯ್ಕ, ಸಿ.ಐ.ಟಿ.ಯು ಮುಖಂಡ ಸುಭಾಸ ಕೊಪ್ಪಿಕರ್, ತಾಲೂಕು ಕಾರ್ಯದರ್ಶಿ ಗೀತಾ ನಾಯ್ಕ ಸೇರಿದಂತೆ ಹಲವು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತಿದ್ದರು.