• ಮಳೆಯಿಂದ ರಕ್ಷಣೆ ಹೊಂದಲು ಕೊಡೆ ಬಿಚ್ಚಿದ್ದೇ ಯುವತಿ ಸಾವಿಗೆ ಕಾರಣ
ಭಟ್ಕಳ: ಬೈಕಿನಿಂದ ಬಿದ್ದ ಯುವತಿಯೋರ್ವಳು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೃತ ಯುವತಿಯನ್ನು ತಾಲೂಕಿನ ಜಾಲಿ ಪ.ಪಂ ನಿವಾಸಿ ಹಾದಿಯಮ್ಮ ತಿಮ್ಮಪ್ಪಗೊಂಡಾ(28) ಎಂದು ಗುರುತಿಸಲಾಗಿದೆ.
ಇವರು ಮಾರುಕೇರಿಯಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸೋಮವಾರ ಬೆಳಿಗ್ಗೆ ತನ್ನ ಸಹೋದರ ಮಾವನ ಬೈಕ್ ನಲ್ಲಿ ಭಟ್ಕಳದ ಕಡೆಗೆ ಬರುತ್ತಿರುವಾಗ ಮಾರೂಕೇರಿ ಶಾಲೆಯ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಭಟ್ಕಳದ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಇಂದು ಮಾರುಕೇರಿಯಿಂದ ತನ್ನ ಮಾವನೊಂದಿಗೆ ಬೈಕ್ ನಲ್ಲಿ ಬರುತ್ತಿರುವಾಗ ಮಳೆಯಿಂದ ರಕ್ಷಣೆ ಹೊಂದಲು ಕೊಡೆಯನ್ನು ಬಿಚ್ಚಿದ್ದಾರೆ. ಇಂದು ಬೆಳಿಗ್ಗೆಯಿಂದಲೆ ತಾಲೂಕಿನಾದ್ಯಂತ ಬಿರುಗಾಳಿಯಿಂದ ಕೂಡಿದ ಮಳೆ ಸುರಿಯುತ್ತಿದ್ದು ಗಾಳಿಯ ರಭಸಕ್ಕೆ ಕೊಡೆ ಹಾರಿದ ಪರಿಣಾಮ ಹಿಮ್ಮುಖವಾಗಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೆ ಆಕೆಯನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.