ಜೆಡಿಎಸ್ ಸಖ್ಯ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಇನಾಯತ್ ಉಲ್ಲಾ ಶಾಬಾಂದ್ರಿ ತಯಾರಿ
ಭಟ್ಕಳ: ಹಲವು ವರ್ಷಗಳಿಂದ ಜನತಾ ಪರಿವಾರದಲ್ಲಿಯೇ ಗುರುತಿಸಿಕೊಂಡು, ಪ್ರಸ್ತುತ ಜ್ಯಾತ್ಯಾತೀತ ಜನತಾದಳದ ಮುಖಂಡರಾಗಿ ಜಿಲ್ಲೆಯಾದ್ಯಂತ ಚಿರಪರಿತರಾಗಿರುವ ಜೆಡಿಎಸ್ ಮುಖಂಡ, ಭಟ್ಕಳ ಮಜ್ಜಿಸೇ ಇಸ್ಲಾವ ತಂಜೀಮ್ ಅಧ್ಯಕ್ಷರಾದ ಇನಾಯಿತುಲ್ಲಾ ಶಾಬಂದ್ರಿ ಕಾಂಗ್ರೆಸ್ ಸೇರ್ಪಡೆಯಾಗುವ ಸುದ್ದಿ ಹೊರಬಿದ್ದಿದೆ
ಜೆಡಿಎಸ್ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಇನಾಯಿತುಲ್ಲಾ ಶಾಬಂದ್ರಿ ಮತ್ತಿತರ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು, ಸದ್ಯದ ಜೆಡಿಎಸ್ ತೊರೆಯುವ ಲಕ್ಷಣವಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಖಚಿತವಾಗಿರುವುದರಿಂದ ಈಗಾಗಲೇ ಅವರೆಲ್ಲ ಜೆಡಿಎಸ್ನಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ. ಆದರೆ ಕಾಂಗ್ರೆಸ್ ಸೇರ್ಪಡೆಯ ನಂತರ ತಮ್ಮ ಸ್ಥಾನಮಾನ ಏನು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗಿದ್ದು, ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಜಮೀರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಭೇಟಿಯಾದ ಶಾಬಾಂದ್ರಿ: ಇನಾಯಿತ್ ಉಲ್ಲಾ ಶಾಬಂದ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗಿದೆ. ಈ ನಡುವೆ ಜೆಡಿಎಸ್ನಲ್ಲಿ ಪ್ರಭಾವಿಯಾಗಿದ್ದ ಜಮೀರ್ ಅಹ್ಮದ್ ಹಿಂದೆಯೆ ಕಾಂಗ್ರೆಸ್ ಸೇರಿಕೊಂಡು, ಪ್ರಸ್ತುತ ಸಚಿವರೂ ಆಗಿದ್ದಾರೆ. ಹೀಗಾಗಿ ಅವರ ಮೂಲಕವೇ ಜೆಡಿಎಸ್ನಲ್ಲಿರುವ ಮುಸ್ಲಿಮ್ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನತ್ತ ಇನ್ನಷ್ಟು ಮುಖಂಡರು ಗುಳೆ ಹೋಗುವುದು ಖಚಿತ ಎನ್ನಲಾಗುತ್ತಿದೆ.
ರವಿವಾರ ಸಚಿವ ಮಂಕಾಳ ವೈದ್ಯ ಅವರ ಭಟ್ಕಳ ಕಚೇರಿ ಉದ್ಘಾಟನೆಗೊಂಡ ಸಂದರ್ಭದಲ್ಲಿ ಇನಾಯಿತುಲ್ಲಾ ಶಾಬಂದ್ರಿ ಆಗಮಿಸಿ ಶುಭ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇನಾಯತ್ ಉಲ್ಲಾ ಶಾಬಾಂದ್ರಿ, ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಪ್ರಕಟಿಸುತ್ತೇವೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಸೇರ್ಪಡೆಯಾಗಿರುವುದರಿಂದ ನಮಗೆ ಬೇರೆ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.