ಭಟ್ಕಳ: ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಲು ಮತ್ತೊಮ್ಮೆ ಭಟ್ಕಳ ತಾಲೂಕಿನ ಬುಡಕಟ್ಟು ಗಿರಿಜನರ ಗೊಂಡರ ಡೆಕ್ಕೆ ಕುಣಿತವನ್ನು ಆಯ್ಕೆ ಮಾಡಲಾಗಿದೆ.
ಡೆಕ್ಕೆ ಕುಣಿತದಲ್ಲಿ ಪಾಲ್ಗೊಳ್ಳುವ ಕಲಾವಿದರ ಗರಿಷ್ಠ ಸಂಖ್ಯೆಯನ್ನು 15ಕ್ಕೆ ನಿಗದಿಪಡಿಸಲಾಗಿದ್ದು, ಭಟ್ಕಳದಿಂದ ತೆರಳುವ ಕಲಾವಿದರಿಗೆ ಅ.23 ಮತ್ತು 24ರಂದು ಮೈಸೂರಿನ ದೇವರಾಜ ಮೊಹಲ್ಲಾ ವಿನೋಬಾ ರಸ್ತೆಯಲ್ಲಿನ ನಂಜರಾಜ ಬಹಾದ್ದೂರದ ಛತ್ರದಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತಿದೆ. 98ರಲ್ಲಿ ಪ್ರಥಮ ಬಾರಿಗೆ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಟ್ಕಳದ ತಿಮ್ಮಪ್ಪ ಗೊಂಡ ನೇತೃತ್ವದಲ್ಲಿ ಗೊಂಡರ ಡೆಕ್ಕೆ ಕುಣಿತ ಪ್ರದರ್ಶನಕ್ಕೆ ಸರಕಾರ ಅವಕಾಶ ಕಲ್ಪಿಸಿತ್ತು. ನಂತರ 2017ರಲ್ಲಿ ತಿಮ್ಮಪ್ಪ ಗೊಂಡರ ಮತ್ರ ನಾಗಪ್ಪ ಗೊಂಡ ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ತಂಡವು ದ್ವಿತೀಯ ಬಹುಮಾನ ಪಡೆದಿತ್ತು. 2018ರಲ್ಲಿ ಮತ್ತೆ ಅವಕಾಶ ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತವಾಯಿತು. 2022ರಲ್ಲಿ ಈ ತಂಡವು ತೃತೀಯ ಬಹುಮಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೀಗ 2023ರಲ್ಲಿಯೂ ಅವಕಾಶ ನೀಡಲಾಗಿದ್ದು, ಅ.24ರಂದು ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಗೊಂಡರ ಡಕ್ಕೆ ಕುಣಿತ ಪ್ರದರ್ಶನಗೊಳ್ಳಲಿದೆ.
ಭಟ್ಕಳ ಗೊಂಡರ ಡೆಕ್ಕೆ ಕುಣಿತವು ರಾಜ್ಯಾದ್ಯಾಂತ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ವಿವಿಧ ಕಾರ್ಯಕ್ರಮಗಳಿಗೆ ಭಟ್ಕಳದಿಂದ ತಂಡವನ್ನು ಆಹ್ವಾನಿಸಲಾಗುತ್ತಿದೆ. ಇದು ಭಟ್ಕಳ ಮಾತ್ರವಲ್ಲ, ಉತ್ತರ ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ.