ಭಟ್ಕಳ: ಪುರಸಭೆ ಕಟ್ಟಡದ ಮೇಲೆ ನಡೆದ ಕಲ್ಲು ತೂರಾಟ ಘಟನೆಯನ್ನು ನೆಪವಾಗಿಟ್ಟುಕೊಂಡು ಪೊಲೀಸರು ನಾಮಧಾರಿ ಸಮಾಜದ ಅಮಾಯಕ ಯುಕವರನ್ನು ಬಂಧಿಸುತ್ತಿದ್ದಾರೆ ಇದನ್ನು ವಿರೋಧಿಸಿ ಅ.೪ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್.ನಾಯ್ಕ ಹೇಳಿದ್ದಾರೆ.
ಅವರು ಆಸರಕೇರಿ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು. ಪುರಸಭೆ ಮಳಿಗೆ ಕಬ್ಜಾವನ್ನು ವಿರೋಧಿಸಿ ಆತ್ಮಹತ್ಯೆ ಗೈದಿರುವ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಸರ್ಕಾರ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ, ಕೇವಲ ಶಾಸಕ ಮಾಂಕಾಳ್ ವೈದ್ಯ, ಸಚಿವ ದೇಶಪಾಂಡೆ ಹಾಗೂ ಇತರರು ವೈಯಕ್ತಿಕವಾಗಿ ನೆರವು ನೀಡಿದ್ದಾರೆ ಹೊರತು ಸರ್ಕಾರ ಸಂತೃಸ್ತ ಕುಟುಂಬಕ್ಕೆ ಯಾವುದೆ ನರೆವು ಒದಗಿಸಿಲ್ಲ, ಸೆ.೧೪ ರಂದು ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕೆಲವರ ವಿರುದ್ಧ ದರೋಡೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇದನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದರೂ ಇದುವರೆ ಅವರ ಮೇಲೆ ಯಾವುದೇ ಕ್ರಮ ಜರಗಿಸಿಲ್ಲ ಎಂದ ಅವರು ಇದನ್ನು ಖಂಡಿಸಿ ಹಾಗೂ ಅಮಾಯಕರನ್ನು ಬಿಡುಗಡೆಗೆ ಒತ್ತಾಯಿಸಿ ಧರಣಿ ನಡೆಸಲಾಗುವುದು. ಧರಣಿಯಲ್ಲಿ ತಾಲೂಕಿನ ಸುಮಾರು ೧೦ಸಾವಿರಕ್ಕೂ ಹೆಚ್ಚು ನಾಮಧಾರಿಗಳು ಭಾಗವಹಿಸಿದ್ದಾರೆ ಎಂದು ನಾಯ್ಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನ್ ನಾಯ್ಕ, ಕಾರ್ಯದರ್ಶಿ ಹಾಗೂ ರಾಜೇಶ್ ನಾಯ್ಕ, ಶ್ರೀದರ್ ನಾಯ್ಕ, ವೆಂಕಟೇಶ್ ನಾಯ್ಕ, ಗಣಪತಿ ನಾಯ್ಕ ಮುಂತಾದವರು ಉಪಸ್ಥಿತಿದ್ದರು.