ಭಟ್ಕಳ: ಹುಟ್ಟು ಅಂಗವಿಕಲೆಯಾದ ಭಟ್ಕಳ ತಾಲ್ಲೂಕಿನ ಶಿರಾಲಿಯ ಸುಮಾರಿಯಾ ಯೂಸುಫ್ ಸಾಹೇಬ್ಗೆ ಶಾಸಕ ಮಂಕಾಳ ವೈದ್ಯ ಮುಖ್ಯಮಂತ್ರಿ ಪರಿಹಾರ ನಿಧಿ ₹ 2 ಲಕ್ಷ ಸಹಾಯಧನದ ಚೆಕ್ನ್ನು ನೀಡಿದರು.
ಹುಟ್ಟುವಾಗಲೇ ಎರಡೂ ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದ ಸುಮಾರಿಯಾ ಈ ಸ್ಥಿತಿಯಲ್ಲೇ ಛಲದಿಂದ ಪದವಿಯನ್ನು ಪೂರೈಸಿದಳು. ಎಲ್ಲರಂತೆ ತಾನೂ ನಡೆದಾಡಬೇಕು ಎಂಬ ಮಹದಾಸೆಯಿಂದ ಕೃತಕ ಕಾಲುಗಳನ್ನು ಜೋಡಿಸಿಕೊಳ್ಳಲು ನಿರ್ಧರಿಸಿದಳು. ಆದರೆ ಕೃತಕ ಕಾಲಿಗೆ ಅಂದಾಜು ₹ 4.50 ಲಕ್ಷ ಬೇಕಾಗಿತ್ತು. ಈ ಸಂದರ್ಭದಲ್ಲಿ ಸುಮಾರಿಯಾ ಭಟ್ಕಳದ ಶಾಸಕ ಮಂಕಾಳ ವೈದ್ಯರಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡು ಹಣಕಾಸಿನ ನೆರವಿಗೆ ಮನವಿ ಮಾಡಿಕೊಂಡಳು. ಮನವಿಗೆ ಸ್ಪಂದಿಸಿದ ಶಾಸಕರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 2 ಲಕ್ಷ, ವೈಯಕ್ತಿಕವಾಗಿ ₹ 50 ಸಾವಿರ, ಕೆಡಿಸಿಸಿ ಬ್ಯಾಂಕ್ನಿಂದ ₹ 10ಸಾವಿರ, ಜನತಾ ಕೋ ಆಪರೇಟಿವ್ ಬ್ಯಾಂಕ್ನಿಂದ ₹ 10ಸಾವಿರ ಸಹಾಯಧನ ಒದಗಿಸಿದ್ದಾರೆ.