ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

Source: S O News Service | By I.G. Bhatkali | Published on 4th September 2021, 8:54 PM | Coastal News | Special Report |

ಭಟ್ಕಳ: ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ವಿಧಾನಸೌಧದ ಸದ್ಯದ ಸ್ಥಿತಿಗತಿ! ಜನರ ಕನಸಿನ ಸೌಧ ಉದ್ಘಾಟನೆಗೊಂಡು ಒಂದು ವರ್ಷವೂ ಕಳೆದಿಲ್ಲ. ಆಗಲೇ ಇಡೀ ಕಟ್ಟಡದಲ್ಲಿ ಶಿಸ್ತು, ಸ್ವಚ್ಛತೆ ಎಲ್ಲವೂ ಕಣ್ಮರೆಯಾಗಿದೆ. ಸಾರ್ವಜನಿಕರಿಗೆ ನೀಡಲಾಗುವ ಸೇವೆಯ ರೀತಿನೀತಿಗಳು ಹಳಿ ತಪ್ಪಿದ್ದು, ಜನರು ಸೇವೆಯನ್ನು ಪಡೆಯಲು ಕಲ್ಲು ಏರಿ ನಿಲ್ಲಬೇಕಾಗಿದೆ. 

ಭಟ್ಕಳ ಮಿನಿವಿಧಾನ ಸೌಧದಲ್ಲಿ ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ,

 ಕೋಟ್ಯಾಂತರ ರುಪಾಯಿ ಖರ್ಚು ಮಾಡಿ ಮಿನಿ ವಿಧಾನಸೌಧ ಕಟ್ಟಲಾಗಿದೆ. ಆದರೆ ಇಲ್ಲಿ ಸರಿಯಾದ ವ್ಯವಸ್ಥೆ ಇನ್ನೂ ಆಗಿಲ್ಲ. ಹಳ್ಳಿಗಳಿಂದ ಬರುವ ಮಹಿಳೆಯರು, ವೃದ್ಧರು, ಸ್ವಲ್ಪ ಕುಳ್ಳನೆಯ ಜನರು ಕಲ್ಲನ್ನು ಏರಿ ಕೆಲಸ ಮಾಡಿಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ
  - ಮಂಗಳಾ ಗೊಂಡ, ಜಾಲಿ ಪಟ್ಟಣ ಪಂಚಾಯತ ಸದಸ್ಯರು

ನೋಂದಣಿ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಇತ್ಯಾದಿಗಳು ಸೇವೆ ನೀಡಲು ಆರಂಭಿಸಿವೆ. ವಿಧಾನಸೌಧದ ನೆಲ ಮಹಡಿಯಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಆಹಾರ, ನೆಮ್ಮದಿ ಕೇಂದ್ರ, ಪಹಣಿ ಪತ್ರಿಕೆ ವಿತರಣೆ ಕೆಲಸ ಕಾರ್ಯಗಳನ್ನು ನಡೆಯುತ್ತಿವೆ. ವಿಧಾನಸೌಧ ಉದ್ಘಾಟನೆಗೊಂಡ ಆರಂಭದಲ್ಲಿ ಜನರು ವಿಧಾನಸೌಧದ ಒಳಗೆ ಕಾಲಿಟ್ಟು ಸೇವೆಯನ್ನು ಪಡೆಯುತ್ತಿದ್ದರು. ಆದರೆ ಬರ ಬರುತ್ತ ಉಳ್ಳವರು, ಮರಿಪುಢಾರಿಗಳು ಸೀದಾ ನೆಮ್ಮದಿಕೇಂದ್ರ, ಆಹಾರ ವಿಭಾಗ, ಪಹಣಿ ಪತ್ರಿಕೆ ವಿತರಿಸುವ ಕಚೇರಿಯ ಸಿಬ್ಬಂದಿಗಳು, ಅಧಿಕಾರಿಗಳ ಬಳಿಗೆ ಧಾವಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಆರಂಭಿಸಿದರೆ, ಹಳ್ಳಿಗಳಿಂದ ಬರುವ ಬಡವರು ಹೊರಗೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಯಿತು. ಈ ಬಗ್ಗೆ ಜನರು ಅಧಿಕಾರಿಗಳ ಮುಂದೆ ಅಸಮಾಧಾನವನ್ನು ಹೊರಗೆ ಹಾಕಲಾರಂಭಿಸಿದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಯಾರಿಗೂ ಕಚೇರಿಯ ಒಳಗೆ ಕಾಲಿಡಲು ಅವಕಾಶ ನೀಡದೇ ಮಿನಿ ವಿಧಾನಸೌಧದ ಹೊರಗೆ ಆಯಾ ಕಚೇರಿಯ ಕಿಟಕಿಯಲ್ಲಿಯೇ ಅರ್ಜಿ ನೀಡಲು ಅವಕಾಶ ಮಾಡಿಕೊಟ್ಟರು. ಆದರೆ ಕಿಟಕಿಯೊಳಗೆ ಕೈಯೊಡ್ಡುವುದಕ್ಕೆ ಫಲಾನುಭವಿಗಳು ಹರಸಾಹಸ ಮಾಡಬೇಕಾಗಿದೆ. ನಂತರ ಒಂದೆರಡು ಕಡೆ ಕೆಂಪು ಕಲ್ಲನ್ನು ಹಾಸಿ ಅದರ ಮೇಲೆ ನಿಂತು ಸೇವೆಯನ್ನು ಪಡೆಯಲು ಸೂಚಿಸಲಾಗಿದ್ದು, ಜನರು ಕಲ್ಲು ಹತ್ತಿ ಇಳಿಯುವ ದೃಶ್ಯ ಸಾಮಾನ್ಯವಾಗಿದೆ. ಸ್ವಲ್ಪ ಕುಳ್ಳನೆಯ ಜನರಂತೂ ಕಲ್ಲನ್ನು ಏರಿಯೂ ತುದಿ ಬೆರಳ ಮೇಲೆ ನಿಂತು ಸರ್ಕಸ್ ಮಾಡುವುದನ್ನು ಕಾಣಬಹುದಾಗಿದೆ. ವೃದ್ಧರು, ಮಹಿಳೆಯರ ಪಾಡಂತೂ ಕೇಳುವುದೇ ಬೇಡ. ಹಾಗೆ ಹೀಗೆ ಸರ್ಕಸ್ ಮಾಡಿ ಕಲ್ಲು, ಕಿಟಕಿಯ ಮೆಟ್ಟಿಲನ್ನು ಏರುವ ಜನರು ಇಳಿಯುವಾಗ ಹೊಂಡದಲ್ಲಿ ಹಾರುವಂತೆ ಕೆಳಕ್ಕೆ ಹಾರಿ ಮೇಲಿನಿಂದ ಕೆಳಕ್ಕೆ ಇಳಿಯುವ ದೃಶ್ಯ ಆಧುನಿಕತೆಯ ಪ್ರತಿಬಿಂಬದಂತಿರುವ ಮಿನಿ ವಿಧಾನಸೌಧದ ಮರ್ಯಾದೆಯನ್ನೇ ಕಳೆಯುತ್ತಿರುವುದಂತೂ ಸುಳ್ಳಲ್ಲ ! ಮತ್ತೆ ಒಂದೆರಡು ಕಡೆ ಕಿಟಕಿಯ ಹೊರಗಡೆ ಮಳೆಯಲ್ಲಿಯೇ ನಿಲ್ಲಬೇಕಾದ ಸ್ಥಿತಿ. ಇನ್ನೊಂದೆಡೆ ಆಹಾರ ನಿರೀಕ್ಷಕರನ್ನು ಕಾಣಬೇಕು ಎಂದರೆ ಕಿಟಕಿಯ ಹೊರಗೆ ಹಾರಿ ಹಾರಿ ಬೀಳಬೇಕು! 

ಒಳಗಿನ ಕೋಣೆಗೆ ಬೀಗ: 

ಕಿಟಕಿಯಲ್ಲಿ ನೀಡುತ್ತಿರುವ ಸೇವೆಯ ಬಗ್ಗೆ ಗಮನಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಶಿರಸ್ತೇದಾರರಿಗೆ ಸೂಚಿಸಲಾಗಿದೆ. 
                                                        - ಎಸ್.ರವಿಚಂದ್ರ, ತಹಸೀಲ್ದಾರರು ಭಟ್ಕಳ

ಈ ನಡುವೆ ಮಿನಿವಿಧಾನ ಸೌಧದ ಹೊರಗೆ ಸೇವೆಗೆ ಅವಕಾಶವನ್ನು ಕಲ್ಪಿಸಿದ ನಂತರವೂ ಉಳ್ಳವರು, ರಾಜಕೀಯ ಮರಿಪುಢಾರಿಗಳು ಕಿಟಕಿಯ ಸರ್ಕಸ್‍ಗೆ ಕಾಯದೇ ನೇರವಾಗಿ ಕಚೇರಿಯ ಒಳಗೆ ತೆರಳಿ ಕೆಲಸ ಮಾಡಿಸಿಕೊಳ್ಳಲು ಸುರುವಿಟ್ಟುಕೊಂಡರು. ನಂತರ ಸಾರ್ವಜನಿಕರ ಕಡೆಯಿಂದ ಮತ್ತದೇ ತಕರಾರು ಎದ್ದಿತು. ಇದೀಗ ಅಧಿಕಾರಿಗಳು ಕಚೇರಿಯ ಬಾಗಿಲಿಗೆ ಬೀಗ ಜಡಿದು ಕಿಟಕಿಯ ಕೆಲಸವನ್ನು ಮುಂದುವರೆಸಿದ್ದಾರೆ. ಕಲ್ಲು, ಪಾಗಾರ ಹತ್ತಿಳಿಯುವ ಅಭ್ಯಾಸ ಇದ್ದವರಿಗೆ ಇದೇನೂ ಕಷ್ಟವಲ್ಲ. ಆದರೆ ಉಳಿದವರಿಗೆ ಇದು ಯಾತನೆಯೇ! 

ಒಳಗೆ ಎಲೆ ಅಡಿಕೆ ಜಗಿದು ಉಗಿದರು:
ಒಂದು ಕಡೆ ಮಿನಿ ವಿಧಾನಸೌಧದಲ್ಲಿ ಶಿಸ್ತನ್ನು ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರೆ, ಕೆಲವು ಕೀಟಲೆಯ ಜನರಿಂದ ಮಿನಿ ವಿಧಾನಸೌಧದ ಸ್ವಚ್ಛತೆಗೆ ಧಕ್ಕೆ ಬಂದಿದೆ. ವಿಧಾನಸೌಧದ ಒಳಗೆ ಎಲೆ ಅಡಿಕೆ ಜಗಿದು ಉಗಿದಿರುವುದು ಕಂಡು ಬಂದಿದೆ. ಮತ್ತೆ ಲಿಫ್ಟ್‍ನಲ್ಲಿಯೂ ಅದೇ ವಿಕೃತಿಯನ್ನು ಕೆಲವರು ಮೆರೆದಿದ್ದಾರೆ. ಸರಕಾರಿ ಕಟ್ಟಡ ಆಸ್ತಿ ರಕ್ಷಣೆಯ ಹೊಣೆ ಅಧಿಕಾರಿಗಳದ್ದು ಮಾತ್ರವಲ್ಲ, ಜನರಿಗೂ ಇರಬೇಕಲ್ಲವೇ?

Read These Next

ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ;ಪೊಕ್ಲೆನ್ ಯಂತ್ರ ಬಳಸಿ ಕಾರ್ಯಾಚರಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...

ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ

ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...