ಜಾಲಿ ಯುಜಿಡಿ ಶುದ್ಧೀಕರಣ ಘಟಕಕ್ಕೆ ಸಾರ್ವಜನಿಕರ ತೀವ್ರ ವಿರೋಧ; ಪ.ಪಂ ಮುತ್ತಿಗೆ ಯತ್ನ
ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸ.ನಂ೨೦೨ ರಲ್ಲಿ ೨೦೦ಕೋಟಿ ವೆಚ್ಚದ ಉದ್ದೇಶಿತ ಯುಜಿಡಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ವಿರೋಧದ ಕಾವು ದಿನೆ ದಿನೆ ಹೆಚ್ಚಾಗುತ್ತಿದ್ದು ನೂರಾರು ಮಂದಿ ಸಾರ್ವಜನಿಕರು ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಜಾಲಿ ಪ.ಪಂ ಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜರಗಿದೆ.
ಮಂಗಳವಾರ ಜರಗಿದ ಪ.ಪಂಚಾಯತ್ ಸಾಮಾನ್ಯ ಸಭೆಗೂ ಮುನ್ನ ಜಾಲಿ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಪೂರ್ವ ಮತ್ತ ಪಶ್ಚಿಮ, ಹಾರ್ನಗದ್ದೆ, ತೆಂಗಿನಹಿತ್ಲು, ದೇವಿನಗರ, ಜಂಗನಗದ್ದೆ, ತಲಗೇರಿ ಮತ್ತು ದೊಡ್ಮನೆ ಮಜಿರೆಯ ಹಾಗೂ ವೆಂಕಟಾಪುರ ಗ್ರಾಮದ ಹುರುಳಿಸಾಲ್, ಕಾರ್ಗದ್ದೆ ವಾರ್ಡಿನ ನೂರಾರು ಮಂದಿ ಪಟ್ಟಣ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಸಾಮಾನ್ಯ ಸಭೆ ಸಾರ್ವಜನಿಕರ ಆಕ್ಷೇಪಣೆ ಬಂದಿರುವುದರಿಂದ ಹಾಗು ಸಂಬಂಧಿತ ಇಲಾಖೆಯವರು ಜಂಟಿ ಸ್ಥಳ ಪರಿಶೀಲನೆ ನಡೆಸದೇ ಜನವಸತಿ ಇರುವ ಸ್ಥಳದಲ್ಲಿ ವೆಟ್ ವೆಲ್ಗಳನ್ನು ಹಾಕುವ ಉದ್ದೇಶ ಇರುವಂತೆ ತೋರಿಬರುವುದರಿಂದ ಸರ್ವೇ ನಂ . ೨೦೨, ೧೧೦, ೧೩೫ ಹಾಗು ೧ರಲ್ಲಿ ಭೂಸ್ವಾಧಿನ ನಡೆಸಬಾರದೆಂದು ಪೂರ್ವ ಮತ್ತ ಪಶ್ಚಿಮ, ಹಾರ್ನಗದ್ದೆ, ದೇವಿನಗರ, ಜಂಗನಗದ್ದೆ, ಸಣ್ಮನೆ ಮತ್ತು ದೊಡ್ಮನೆ ಮಜಿರೆ ಹಾಗೂ ವೆಂಕಟಾಪುರದ ಪ್ರದೇಶದಲ್ಲಿ ಒಳಚರಂಡಿ ಅವಶ್ಯಕತೆ ಇಲ್ಲದೇ ಇರುವುದರಿಂದ ಠರಾವನ್ನು ತಡೆಹಿಡಿಯಲು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಯೋಜನೆ ಅನುಷ್ಠಾನ ಬೇಕೇ ಬೇಡವೇ ಎನ್ನುವ ಕುರಿತು ನಿರ್ಣಯಿಸಲಾಗುವುದೆಂಬ ಠರಾವನ್ನು ತೆಗೆದುಕೊಳ್ಳಬೇಕಾಯಿತು.
ಕೆಳೆದ ಮೂರು ದಿನಗಳ ಹಿಂದೇ ಯೋಜನೆಯನ್ನು ವಿರೋಧಿಸಿ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು ಮನವಿಯಲ್ಲಿ ಸಂಪೂರ್ಣವಾಗಿ ದೋಷಗಳಿಂದ ಕೂಡಿದ ಯುಜಿಡಿ ವ್ಯವಸ್ಥೆಯು ದೇಶದಲ್ಲಿ ವಿಫಲತೆಯನ್ನು ಕಂಡಿದ್ದು, ಇದರ ಸಾಧಕ ಬಾಧಕಗಳನ್ನು ಚರ್ಚಿಸದೇ ಜನವಸತಿ ಪ್ರದೇಶದಲ್ಲಿ ಇಂತಹ ಅವೈಜ್ಞಾನಿಕ ಯೋಜನೆ ನಿರ್ಮಿಸಲಾಗುತ್ತಿದೆ. ಯುಜಿಡಿ ಸಂಪರ್ಕ ಇರುವ ನೂರಾರು ಮೀಟರ್ವರೆಗೆ ಕುಡಿಯುವ ನೀರಿನ ಬಾವಿಗಳು ಪ್ರಭಾವಿತಗೊಳ್ಳುತ್ತವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಕಾಲಕ್ರಮೇಣ ಮಾರಕ ರೋಗಗಳು ಕಾಣಿಸುತ್ತವೆ. ಕಲುಷಿತ ಕುಡಿಯುವ ನೀರಿನ ಬಾವಿಗಳಿಂದ ದುರ್ನಾತ ಬೀರಲು ಆರಂಭಿಸುತ್ತದೆ, ಆಯಾ ಪ್ರದೇಶಗಳಲ್ಲಿ ಸೊಳ್ಳೆಕಾಟ ಆರಂಭವಾಗಿ ಮಾರಕ ರೋಗಗಳು ಜನ್ಮ ಪಡೆದುಕೊಳ್ಳುತ್ತವೆ ಎಂದು ಮನವಿಯಲ್ಲಿ ತಿಳಿಸಿದೆ. ಪಂಚಾಯತ್ನ ಸ.ನಂ.೨೦೨ ರ ಆಸುಪಾಸಿನಲ್ಲಿ ಜನವಸತಿ ಪ್ರದೇಶವಿದ್ದು, ಹಲವು ದೇವಸ್ಥಾನ, ಶಾಲೆಗಳು ನಡೆಯುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು ಕೂಡಲೇ ಈ ಯೋಜನೆಯನ್ನು ಕೈಬಿಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿತ್ತು.
ಈ ಸಂಧರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಾದ ಹರೀಶ್ ನಾಯಕ ಗುಡಿಮನೆ, ಗಣಪತಿ ನಾಯ್ಕ, ಮಹೇಶ ಮೋಗೇರ, ಹರೀಶ ಆಚಾರ್ಯ, ಶಂಕರ ನಾಯ್ಕ, ದಿನೇಶ ನಾಯ್ಕ, ಮಂಜು ನಾಯ್ಕ, ವೆಂಕಟಾಪುರ ಗ್ರಾಮದ ಸಾರ್ವಜನಿಕರಾದ ಹರೀಶ ಗೊಂಡ, ಭರತ ಗೊಂಡ, ಮೋಹಿನಿ ಗೊಂಡ, ಮಂಜುನಾಥ ಗೊಂಡ ಸೇರಿದಂತೆ ಮುಂತಾದ ಜಾಲಿ ಹಾಗೂ ವೆಂಕಟಾಪುರ ಗ್ರಾಮದ ಸಾರ್ವಜನಿಕರು ಇದ್ದರು.