ಭಟ್ಕಳದಲ್ಲಿ ದೇವಸ್ಥಾನ ಮಲೀನ ಖಂಡಿಸಿ ಹಿಂಜಾವೇ ಪ್ರತಿಭಟನೆ

Source: S O News | By MV Bhatkal | Published on 25th May 2017, 10:04 PM | Coastal News | Don't Miss |

ಭಟ್ಕಳ: ತಾಲೂಕಿನ ದಂಡಿನ ದುರ್ಗಾ ದೇವಸ್ಥಾನದ ಗೋಡೆಗೆ ರಕ್ತ ಬಳಿದ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕ, ಭಟ್ಕಳ ಬಿಜೆಪಿಯ ಪ್ರಮುಖರು ಹಾಗೂ ತಾಲೂಕಿನ ವಿವಿಧ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಗುರುವಾರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಡಿ.ನಾಯ್ಕ, ಭಟ್ಕಳದಲ್ಲಿ ದೇವಸ್ಥಾನವನ್ನು ಮಲೀನಗೊಳಿಸುವ ಕೆಲಸಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದರಿಂದ ದ್ವೇಷ ಭಾವನೆ ಹುಟ್ಟಿಕೊಳ್ಳುತ್ತಿದ್ದು, ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಾಗಿದೆ ಎಂದು ತಿಳಿಸಿದರು. ಆಸರಕೇರಿ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಬಿ.ನಾಯ್ಕ ಮಾತನಾಡಿ, ಆರೋಪಿಗಳು ಯಾವುದೇ ಧರ್ಮಕ್ಕೆ ಸೇರಿರಲಿ ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು. ಹಿರಿಯ ಮುಖಂಡ ಗೋವಿಂದ ನಾಯ್ಕ, ಭಟ್ಕಳದಲ್ಲಿ ವಿವಿಧ ಧರ್ಮಗಳ ಜನರು ವಾಸಿಸುತ್ತಿದ್ದು, ದೇವಸ್ಥಾನಗಳನ್ನು ಕೇಂದ್ರೀಕರಿಸಿಕೊಂಡು ಇಂತಹ ಕೃತ್ಯಗಳು ನಡೆಯುತ್ತಿವೆ. ಕೋಗ್ತಿ ದೇವಸ್ಥಾನಕ್ಕೆ ಮಾಂಸ ಎಸೆದ ಪ್ರಕರಣದ ತನಿಖೆ ಅರ್ಧಕ್ಕೆ ಹಳ್ಳ ಹಿಡಿದಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಪೊಲೀಸರೇ ತಿಳಿಸಬೇಕು ಎಂದರು. ಕೃಷ್ಣ ನಾಯ್ಕ ಆಸರಕೇರಿ, ದಂಡಿನ ದುರ್ಗಾ ದೇವಸ್ಥಾನದ ಗೋಡೆಗೆ ಜಾನುವಾರುಗಳು ಬಡಿದಾಡಿಕೊಂಡು ಮುರಿದ ಕೋಡಿನಿಂದ ಒಸರಿದ ರಕ್ತ ತಗುಲಿದೆ ಎಂದು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ಪೊಲೀಸರ ಮಾತು ನಿಜವಾಗಿದ್ದರೆ, ಕೋಡು ಮುರಿದುಕೊಂಡ ಜಾನುವಾರುಗಳನ್ನು ಹಾಜರುಪಡಿಸಲಿ. ಹಿಂದೆ ಹಲವಾರು ಬಾರಿ ದೇವಸ್ಥಾನ ಮಲೀನ ಘಟನೆ ನಡೆದಿದ್ದು, ಆರೋಪಿಗಳು ನಮ್ಮವರೇ ಆಗಿದ್ದರೂ ಬಂಧಿಸಿ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದರು. ಹಿಂದೂ ಜಾಗರಣಾ ವೇದಿಕೆಯ ರಾಘವೇಂದ್ರ ನಾಯ್ಕ ಮನವಿ ಪತ್ರವನ್ನು ಓದಿ ಹೇಳಿದರು. ದೇವಸ್ಥಾನಗಳ ರಕ್ಷಣೆಗೆ ಸಂಬಂಧಿಸಿದಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕಿಡಿಗೇಡಿಗಳಿಗೆ ಆನೆ ಬಲ ಬಂದಂತಾಗಿದೆ. ಒಂದು ತಿಂಗಳ ಒಳಗೆ ಆರೋಪಿಗಳನ್ನು ಬಂಧಿಸದೇ ಇದ್ದರೆ ಸಂಘಟನೆಯ ವತಿಯಿಂದ ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿ  ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ. ಇದಕ್ಕೂ ಪೂರ್ವದಲ್ಲಿ ಪ್ರತಿಭಟನಾಕಾರರು ದಂಡಿನ ದುರ್ಗಾ ದೇವಸ್ಥಾನದಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದರು. ಡಿವಾಯ್‍ಎಸ್ಪಿ ಶಿವಕುಮಾರ್ ಮನವಿ ಪತ್ರವನ್ನು ಸ್ವೀಕರಿಸಿದರು. ಸಿಪಿಐ ಸುರೇಶ ನಾಯಕ, ಎಸೈ ಕುಡಗುಂಟಿ ಉಪಸ್ಥಿತರಿದ್ದರು. ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ರಾಜೇಶ ನಾಯ್ಕ, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಬಿ. ನಾಯ್ಕ, ದಿನೇಶ ನಾಯ್ಕ, ಹನ್ಮಂತ ನಾಯ್ಕ, ರವಿ ನಾಯ್ಕ ಜಾಲಿ, ಮೋಹನ ನಾಯ್ಕ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ಲಕ್ಷ್ಮೀನಾರಾಯಣ ನಾಯ್ಕ, ಆನಂದ ನಾಯ್ಕ, ದಿನೇಶ ಗವಾಳಿ, ವೆಂಕಟೇಶ ದೇವಡಿಗ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...