ಭಟ್ಕಳ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭಟ್ಕಳ ಸರಕಾರಿ ಆಸ್ಪತ್ರೆಯನ್ನು ಮತ್ತೊಮ್ಮೆ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ರೂಪಿಸಲು ವೈದ್ಯಾಧಿಕಾರಿಗಳು ಮುಂದಾಗಿದ್ದು, ಆಸ್ಪತ್ರೆಯಲ್ಲಿ ಒಳರೋಗಿಗಳಾಗಿದ್ದ 21 ಕೊರೊನಾ ರಹಿತ ರೋಗಿಗಳನ್ನು ಪಕ್ಕದ ಬಿಸಿಎಮ್ ಹಾಸ್ಟೆಲ್ಗೆ ಸ್ಥಳಾಂತರಿಸಲಾಗಿದೆ.
ರವಿವಾರ ಶಾಸಕ ಸುನಿಲ್ ನಾಯ್ಕ ಉಪಸ್ಥಿತಿಯಲ್ಲಿ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಈ ಕುರಿತು ತಾವು ಕೈಗೊಂಡ ಕಾರ್ಯಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಭಟ್ಕಳ ತಾಲೂಕಿನಲ್ಲಿ ಸದ್ಯ 13 ಕೋವಿಡ್ ಪೀಡಿತರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 36 ಸೋಂಕಿತರನ್ನು ಹೋಮ್ ಕ್ವಾರೆಂಟೈನ್ಗೆ ಒಳಪಡಿಸಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
ಬೆಂಗಳೂರಿನಲ್ಲಿ ಬೆಡ್ ಸಿಗದೇ ಭಟ್ಕಳಕ್ಕೆ ಬಂದ ವ್ಯಕ್ತಿಯೋರ್ವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ, ಉಳಿದ ಕಡೆ ಕಂಡು ಬಂದಿರುವ ಆಕ್ಸಿಜನ್ ಕೊರತೆ ಭಟ್ಕಳದಲ್ಲಿ ಬರದಂತೆ ಮುಂಜಾಗೃತೆ ವಹಿಸಲಾಗಿದೆ - ಡಾ.ಸವಿತಾ ಕಾಮತ್, ವೈದ್ಯಾಧಿಕಾರಿಗಳು, ಸರಕಾರಿ ಆಸ್ಪತ್ರೆ ಭಟ್ಕಳ |
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಈ ಕಾರಣದಿಂದ ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಕೊರೊನಾ ಸೋಂಕಿತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ರೂಪಿಸಿದ್ದೇವೆ. ಉಳಿದ ಕಡೆ ಕಂಡು ಬಂದಿರುವ ಆಕ್ಸಿಜನ್ ಕೊರತೆ ಭಟ್ಕಳದಲ್ಲಿ ಬಾರದಿರಲಿ ಎಂಬ ಕಾರಣಕ್ಕೆ ಎಲ್ಲ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಪರಿಣಾಮವಾಗಿ ಬೆಂಗಳೂರಿನಲ್ಲಿ ಬೆಡ್ ಸಿಗದೇ ವ್ಯಕ್ತಿಯೋರ್ವರು ಭಟ್ಕಳಕ್ಕೆ ಬಂದಿದ್ದು, ಅವರಿಗೆ ಇದೇ ಸರಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ.
ಕೊರೊನಾ ರಹಿತ ರೋಗಿಗಳಿಗೆ ನೀಡಲಾಗಿರುವ ಬಿಸಿಎಮ್ ಹಾಸ್ಟೆಲ್ನಲ್ಲಿ ಸದ್ಯ 30 ಬೆಡ್ಗಳನ್ನು ಹಾಕಲಾಗಿದ್ದು, ಅಲ್ಲಿ ಇನ್ನೂ ಹೆಚ್ಚಿನ ರೋಗಿಗಳನ್ನು ದಾಖಲಿಸಿಕೊಳ್ಳಲು ಅವಕಾಶ ಇದೆ. ಶಸ್ತ್ರಚಿಕಿತ್ಸೆ, ಹೆರಿಗೆ, ಹೊರರೋಗಿ ತಪಾಸಣೆ ಮತ್ತು ಚಿಕಿತ್ಸೆಗಳನ್ನು ಯಥಾ ಪ್ರಕಾರ ಮುಂದುವರೆಸಲಾಗುತ್ತಿದ್ದು, ದಿನದ 24 ಗಂಟೆಯೂ ಸಾರ್ವಜನಿಕ ಸೇವೆಗೆ ವೈದ್ಯರು ಸಿದ್ಧರಿದ್ದಾರೆ ಎಂದು ವಿವರಿಸಿದರು. ಶಾಸಕ ಸುನಿಲ್ ನಾಯ್ಕ ಮಾತನಾಡಿ, ಕೋವಿಡ್ ಬಗ್ಗೆ ತಾಲೂಕಿನ ಜನರು ಭಯಪಡುವ ಅಗತ್ಯ ಇಲ್ಲ. ತಾಲೂಕಿನಲ್ಲಿ ವೈದ್ಯಕೀಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.