ಪ್ರಚೋದನೆಯಿಂದ ಯಾವ ಸಮಸ್ಯೆಗೂ ಪರಿಹಾರ ಇಲ್ಲ: ದೇಶಪಾಂಡೆ
ಭಟ್ಕಳ: ಜನರನ್ನು ಅನಾವಶ್ಯಕವಾಗಿ ಪ್ರಚೋದಿಸುವುದರಿಂದ ಅವರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ರವಿವಾರ ಸಂಜೆ ಮೃತ ರಾಮಚಂದ್ರ ನಾಯ್ಕ ಮನೆಗೆ ತೆರಳಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ಪ್ರತಿಭಟನೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ನಾವು ಶಾಂತಿ, ಸೌಹಾರ್ದತೆಯನ್ನು ಬಯಸುತ್ತಿದ್ದೇವೆ ಎಂದ ಅವರು, ಎಲ್ಲ ಕೆಲಸವನ್ನೂ ಕಾನೂನು ಚೌಕಟ್ಟಿನಲ್ಲಿಯೇ ಕೈಗೊಳ್ಳಬೇಕಾಗಿದೆ. ನಮ್ಮ ಕೈಲಾದ ಸಹಾಯವನ್ನು ಮೃತ ಕುಟುಂಬಕ್ಕೆ ಮಾಡಿದ್ದೇವೆ. ಸರಕಾರದಿಂದ ನೀಡಲಾಗುವ ಪರಿಹಾರದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ. ಸರಕಾರದ ಮಟ್ಟದಲ್ಲಿ ಎಲ್ಲವೂ ಆಗಬೇಕಿರುವುದರಿಂದ ಮುಂದಿನ ದಿನಗಳಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪುರಸಭಾ ಕಚೇರಿಗೆ ಕಲ್ಲು ಎಸೆತ, ಇನ್ನಿತರ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರ ಮೇಲಿರುವ ಪ್ರಕರಣವನ್ನು ಕೈ ಬಿಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರ ಕೆಲಸ ಕಾರ್ಯಗಳಲ್ಲಿ ನಾವು ತಲೆ ಹಾಕುವುದಿಲ್ಲ. ಮುಗ್ಧ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದರೆ ಅರ್ಧ ರಾತ್ರಿಯಾದರೂ ಸರಿಯೇ ಫೋನ್ ಕರೆ ಮಾಡಿದರೆ ಅಂತವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ, ಅವರನ್ನು ರಕ್ಷಿಸಿ ಎಂದು ನಾನು ಪೊಲೀಸರಿಗೆ ಹೇಗೆ ಹೇಳಲಿ, ಇಂದು ಪೊಲೀಸರ ಮೇಲೆ, ನಾಳೆ ನನ್ನ ಮೇಲೆ ಕಲ್ಲು ಎಸೆದರೆ ಏನು ಮಾಡುವುದು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಇದಕ್ಕೂ ಪೂರ್ವದಲ್ಲಿ ಅಂಗಡಿಕಾರರೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರಕಾರ ಬಡವರ ನಿಂತಿದೆ. ರು.10 ಸಾವಿರ ಭದ್ರತಾ ಠೇವಣಿಯನ್ನಿಟ್ಟುಕೊಂಡು ರು.1 ಲಕ್ಷಕ್ಕೆ ಬಾಡಿಗೆ ಏರಿಸಿ ಹರಾಜು ಕರೆಯಲು ಅಧಿಕಾರಿಗಳು ಅವಕಾಶ ನೀಡಿರುವುದು ತಪ್ಪು. ಅಂಗಡಿಕಾರರನ್ನು ತೆರವು ಮಾಡದಂತೆ ಶಾಸಕ ಮಂಕಾಳು ಹಲವಾರು ಬಾರಿ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಕಾಯ್ದೆಯಲ್ಲಿ ಅವಕಾಶ ಇದ್ದರೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಮೂಲ ಅಂಗಡಿಕಾರರಿಗೆ ಅಂಗಡಿಯನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಮಂಕಾಳು ವೈದ್ಯ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಭಟ್ಕಳ ಸಹಾಯಕ ಆಯುಕ್ತ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಜಿಪಂ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ, ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಆರ್.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.