ಖಾನಪುರದಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾರ್ಯಕರ್ತರ ಅಸಮಧಾನ; ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೆ ಮೌನಕ್ಕೆ ಶರಣು
ಖಾನಾಪುರ (ಬೆಳಗಾವಿ) ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕ್ಷೇತ್ರದ ಮತದಾರರಿಂದ ಸಂಪರ್ಕ ಕಡಿದುಕೊಂಡಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಖಾನಾಪುರಕ್ಕೆ ಭೇಟಿ ನೀಡಿದಾಗ ಕಾರ್ಯಕರ್ತರ ಸಭೆ ನಡೆಸಿದ್ದು, ಸಂಸದ ನಡೆ ಕುರಿತಂತೆ ಕಾರ್ಯಕರ್ತರು ಅಸಮಧಾನಗೊಂಡಿದ್ದು ಆಕ್ರೋಶ್ರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಸಂಸದ ಅನಂತ್ ಕುಮಾರ್ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಸಂಸದರನ್ನುದ್ದೇಶಿಸಿ ನೇರವಾಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಸಂಪರ್ಕದಲ್ಲಿಲ್ಲ, ನಿಮ್ಮ ಪಿಎ ಕೂಡ ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ .ಎಲ್ಲ ಅಭಿವೃದ್ಧಿ ಕೆಲಸಗಳು ನಿಂತಿವೆ, ಕ್ಷೇತ್ರದ ಸಮಸ್ಯೆಗಳ ಪಟ್ಟಿಯನ್ನು ಸಂಸದರ ಮುಂದೆ ಇಟ್ಟು ನಮ್ಮ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಖಾನಾಪುರದ ಜನರು ಬೆಳಗಾವಿಗೆ ಹೋದರೆ, ಕಾರವಾರಕ್ಕೆ ಎನ್ನುತ್ತಾರೆ. ಕಾರವಾರಕ್ಕೆ ಹೋದರೆ ನೀವು ಬೆಳಗಾವಿಯವರು ಅಲ್ಲಿಗೆ ಹೋಗಿ ಎನ್ನುತ್ತಾರೆ. ಇವೆಲ್ಲದರ ನಡುವೆ ಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ನೀವು 6 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರೂ ಖಾನಾಪುರದಲ್ಲಿ ಒಂದೇ ಒಂದು ಕೇಂದ್ರ ಸರ್ಕಾರದ ಯೋಜನೆ ತಂದಿಲ್ಲ. ಕಾರ್ಮಿಕರಿಗೆ ನಿಮ್ಮಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ, ಅನಂತ್ ಕುಮಾರ್ ಹೆಗಡೆ ಎಲ್ಲಿ ಎಂದು ಜನರು ಕೇಳುತ್ತಿದ್ದಾರೆ, ನಿಮ್ಮನ್ನು ಭೇಟಿ ಮಾಡಲು ನಾವು 200 ಕಿಲೋಮೀಟರ್ ದೂರ ಹೋಗುತ್ತೇವೆ, ಆದರೆ ನೀವು ನಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ಕಾರ್ಯಕರ್ತರ ಅತೃಪ್ತಿ ವ್ಯಕ್ತಪಡಿಸಿದರು. ಕಾರ್ಯಕರ್ತರ ಮಾತುಗಳನ್ನು ಕೇಳಿಸಿಕೊಂಡ ಅನಂತ್ ಕುಮಾರ್ ಹೆಗಡೆ ‘ನಾನು ಚುನಾವಣೆಗೆ ಇಲ್ಲಿಗೆ ಬಂದಿಲ್ಲ’ ಎಂದು ಮಾತು ಬದಲಿಸಿದರು. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೋ ಗೊತ್ತಿಲ್ಲ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನನ್ನ ಗುರಿ. ಅದಕ್ಕಾಗಿಯೇ ನಾನು ಓಡುತ್ತಿದ್ದೇನೆ. ಕೆಲವು ವೈಯಕ್ತಿಕ ಕಾರಣಗಳಿಂದ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮ ಪ್ರಶ್ನೆಗಳಿಂದ ಕಕ್ಕಾಬಿಕ್ಕಿಯಾದ ಅನಂತ್: ಖಾನಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳು ಅನಂತ್ ಕುಮಾರ್ ಹಗಡೆಯನ್ನು ಸುತ್ತುವರಿದು ಸಮಸ್ಯೆಗಳ ಸುರಿ ಮಳೆಗೈದರು.
ಈ ಸಂದರ್ಭದಲ್ಲಿ ಮೌನಕ್ಕೆ ಶರಣಾದ ಅನಂತ್ ಮರುಮಾತನಾಡದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕುಮಟಾದಲ್ಲಿ ವಿಷವನ್ನು ಕಕ್ಕಿದ ಅನಂತ್ ಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ ಎಂಬ ಕಾಮೆಂಟ್ ಗಳು ಹರಿದಾಡುತ್ತಿವೆ.